ಅಮರಾವತಿ: ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಹೊಲಗುಂಡ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ ಎರಡು ಸಮುದಾಯಗಳ ಮಧ್ಯೆ ಕಲ್ಲು ತೂರಾಟ ನಡೆದಿದೆ. ಈ ಸ್ಥಳಕ್ಕೆ ತ್ವರಿತವಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಎರಡು ಗುಂಪುಗಳ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹನುಮ ಜಯಂತಿ ಪ್ರಯುಕ್ತ ಶನಿವಾರ ರಾತ್ರಿ ಧಾರ್ಮಿಕ ಗುಂಪೊಂದು ಮೆರವಣಿಗೆ ನಡೆಸುತ್ತಿತ್ತು. ಈ ಮೆರವಣಿಗೆಯು ಮಸೀದಿ ಹತ್ತಿರಕ್ಕೆ ತೆರಳುತ್ತಿದ್ದಂತೆ, ರಂಜಾನ್ ಪ್ರಯುಕ್ತ ಮೆರವಣಿಗೆಯ ಆಯೋಜಕರು ಮೈಕ್ಗಳನ್ನು ಬಂದ್ ಮಾಡಿದರು. ಆದರೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕೆಲವು ಭಕ್ತರು 'ಜೈ ಶ್ರೀ ರಾಮ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಇದರಿಂದ ಕ್ರೋಧಗೊಂಡ ಮುಸ್ಲಿಂ ಸಮುದಾಯದವರು ಹನಮ ಜಯಂತಿಯ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜಯಂತಿಯಲ್ಲಿ ಪಾಲ್ಗೊಂಡವರು ಪ್ರತಿದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಎರಡೂ ಗುಂಪಿನ ಸದಸ್ಯರನ್ನು ಠಾಣೆಗೆ ಕರೆದೊಯ್ದು, ಸಮಾಧಾನ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಠಾಣೆಯಲ್ಲೇ ಕೆಲವರು ಮಾರಾಮಾರಿಗೆ ಮುಂದಾಗಿದ್ದು, ಎರಡೂ ಗುಂಪಿನವರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ನಾಲ್ವರಿಗೆ ಗಾಯ
ಡೆಹ್ರಾಡೂನ್: ಹನುಮ ಜಯಂತಿಯ ಪ್ರಯುಕ್ತ ಶನಿವಾರ ಸಂಜೆ ನಡೆದ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲೂ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 9 ಮಂದಿಯನ್ನು ಬಂಧಿಸಿದ್ದಾರೆ.ಹರಿದ್ವಾರ ಜಿಲ್ಲೆಯ ರೂರ್ಕಿ ಬಳಿಯ ಭಗವಾನ್ಪುರದಲ್ಲಿ ಹನುಮ ಜಯಂತಿಯ ಮೆರವಣಿಗೆ ಆಗಮಿಸುತ್ತಿದ್ದಂತೆ, ಮನೆಗಳ ಮೇಲೆ ನಿಂತಿದ್ದವರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಕಕ್ಕಾಬಿಕ್ಕಿಯಾಗಿ ಓಡಿದ್ದರಿಂದ ಕಾಲ್ತುಳಿತದ ರೀತಿಯ ಘಟನೆಯೂ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.