ಧರ್ಮಶಾಲಾ: ‘ಕೋವಿಡ್ ಸಾಂಕ್ರಾಮಿಕ ಸೇರಿದಂತೆ ಇತರ ಜಾಗತಿಕ ಬೆದರಿಕೆಗಳನ್ನು ಎದುರಿಸಲು ಎಲ್ಲರೂ ಒಗ್ಗೂಡಬೇಕು’ ಎಂದು ಟಿಬೆಟ್ನ ಅಧ್ಯಾತ್ಮ ಗುರು ದಲೈಲಾಮಾ ಅವರು ಹೇಳಿದ್ದಾರೆ.
ಬುದ್ಧಪೂರ್ಣಿಮೆಯ ಅಂಗವಾಗಿ ಮಾತನಾಡಿದ ಅವರು,‘ ಇತರರನ್ನು ಗೌರವಿಸುವುದು ಮತ್ತು ಬೇರೆಯವರ ಉಳಿತಿನ ಬಗ್ಗೆ ಕಾಳಜಿ ವಹಿಸುವ ಮೂಲಕ ನಮ್ಮಲ್ಲಿರುವ ಸ್ವಾರ್ಥ ಭಾವನೆಯನ್ನು ಕಡಿಮೆಗೊಳಿಸಬೇಕು. ಸ್ವಾರ್ಥ ಭಾವನೆಯೇ ಹೆಚ್ಚಿನ ಸಮಸ್ಯೆಗಳ ಮೂಲ’ ಎಂದಿದ್ದಾರೆ.
‘ನಾನು ಬಾಲ್ಯದಲ್ಲೇ ಬೌದ್ಧ ಶಿಕ್ಷಣವನ್ನು ಪ್ರಾರಂಭಿಸಿದ್ದೇನೆ. ಈಗ ನನಗೆ 86 ವರ್ಷ. ಆದರೂ ನನಗೆ ಕಲಿಯಲು ಬಹಳಷ್ಟಿದೆ. ಬುದ್ಧನ ಕಾಲದಿಂದ ಈಗ ಜಗತ್ತು ಬಹಳಷ್ಟು ಬದಲಾಗಿದೆ. ಹಾಗಿದ್ದರೂ ಅವರ ಭೋಧನೆಗಳ ಸಾರವು ಈಗಿನ ಕಾಲಕ್ಕೂ ಅನ್ವಯವಾಗುತ್ತದೆ’ ಎಂದು ಅವರು ಬುಧವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕೋವಿಡ್ನಿಂದಾಗಿ ವಿಶ್ವವು ಬಹಳ ನೋವನ್ನು ಅನುಭವಿಸಿದೆ. ಕೋವಿಡ್ ಸೇರಿದಂತೆ ಇತರೆ ಜಾಗತಿಕ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸೋಣ. ಬುದ್ಧನ ಬೋಧನೆಗಳು ಕೇವಲ ಒಂದು ಗುಂಪು ಅಥವಾ ರಾಷ್ಟ್ರಕ್ಕೆ ಮಾತ್ರ ಸೀಮಿತವಲ್ಲ. ಜನರು ತಮ್ಮ ಇಚ್ಛೆ ಮತ್ತು ಸಾಮರ್ಥ್ಯಕ್ಕೆ ಅನುಸಾರ ಈ ಮಾರ್ಗವನ್ನು ಪಾಲಿಸಬಹುದು’ ಎಂದು ಅವರು ಹೇಳಿದರು.