ನವದೆಹಲಿ (ಪಿಟಿಐ): ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸುವ ಸಂಬಂಧ ರಚಿಸಲಾಗಿರುವ ಸಮಿತಿ, ಸೋಮವಾರ ತನ್ನ ಪ್ರಥಮ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿತು. ಈ ಸಭೆಗೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಗೈರು ಹಾಜರಾಗಿತ್ತು.
ಕೃಷಿ ಇಲಾಖೆಯ ಮಾಜಿ ಕಾರ್ಯದರ್ಶಿ ಸಂಜಯ್ ಅಗರವಾಲ್ ನೇತೃತ್ವದ ಸಮಿತಿಯು ‘ಶೂನ್ಯ ಬಂಡವಾಳ ಆಧರಿತ ಕೃಷಿ ಪದ್ಧತಿ’ಯನ್ನು ಉತ್ತೇಜಿಸುವ, ದೇಶದ ಅಗತ್ಯ ಆಧರಿಸಿ ಬೆಳೆ ಪದ್ಧತಿ ಬದಲಿಸುವ ಹಾಗೂ ಎಂಎಸ್ಪಿ ಅನ್ನು ಪರಿಣಾಮಕಾರಿಗೊಳಿಸುವ ಕುರಿತಂತೆ ಚರ್ಚಿಸಿತು.
ಸಮಿತಿಯಲ್ಲಿ ಅಧ್ಯಕ್ಷ ಸೇರಿ 26 ಸದಸ್ಯರಿದ್ದಾರೆ. ಎಸ್ಕೆಎಂ ಪ್ರತಿನಿಧಿಸುವವರಿಗಾಗಿ ಮೂರು ಸ್ಥಾನ ಕಾಯ್ದಿಡಲಾಗಿದೆ. ಸಮಿತಿಯು ಚರ್ಚಿಸಿ, ವರದಿ ನೀಡಬೇಕಾದ ಮೂರು ಅಂಶಗಳ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು ಎಂದು ಸಮಿತಿ ಸದಸ್ಯ ವಿನೋದ್ ಆನಂದ್ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯಗಳ ಹಿರಿಯ ಸದಸ್ಯರು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು, ಕರ್ನಾಟಕ, ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಭರತ್ ಭೂಷಣ್ ತ್ಯಾಗಿ, ಗುಣವಂತ್ ಪಾಟೀಲ್, ಕೃಷ್ಣವೀರ್ ಚೌಧರಿ, ಪ್ರಮೋದ್ ಕುಮಾರ್ ಚೌಧರಿ, ಗುಣಿ ಪ್ರಕಾಶ್ ಮತ್ತಿತರರು ರೈತರ ಪ್ರತಿನಿಧಿಗಳಾಗಿ ಸಭೆಯಲ್ಲಿ ಹಾಜರಿದ್ದರು.