ರಾಷ್ಟ್ರಪತಿ ಚುನಾವಣೆಗಾಗಿ ಎಐಡಿಎಂಕೆ ಬೆಂಬಲ ಕೋರಿಲ್ಲ: ವರದಿ ಅಲ್ಲಗಳೆದ ಕಾಂಗ್ರೆಸ್

ನವದೆಹಲಿ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ ಬೆಂಬಲ ಕೋರಿ ಎಐಎಡಿಎಂಕೆ ನಾಯಕ ಇ ಪಳನಿಸ್ವಾಮಿ ಅವರಿಗೆ ರಾಹುಲ್ ಗಾಂಧಿ ಕರೆ ಮಾಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಕಾಂಗ್ರೆಸ್ ಭಾನುವಾರ ‘ಬೊಗಳೆ’ ಎಂದು ತಳ್ಳಿಹಾಕಿದೆ.
ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಜೈರಾಮ್ ರಮೇಶ್ ಅವರು ಈ ಬಗ್ಗೆ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಮಾಧ್ಯಮ ವರದಿ ‘ಬೋಗಸ್, ಸುಳ್ಳು‘ ಮತ್ತು ‘ಗೊಂದಲ ಬಿತ್ತುವ ಕಿಡಿಗೇಡಿತನದ ಪ್ರಯತ್ನ‘ ಎಂದು ಹೇಳಿದ್ದಾರೆ.
‘ಇದು ಸಂಪೂರ್ಣ ಸುಳ್ಳು. ಅಂತಹ ಯಾವುದೇ ಫೋನ್ ಕರೆಯನ್ನು ರಾಹುಲ್ ಮಾಡಿಲ್ಲ. ಡಿಎಂಕೆ-ಕಾಂಗ್ರೆಸ್ ಮೈತ್ರಿ ಗಟ್ಟಿಯಾಗಿದೆ. ಗೊಂದಲವನ್ನು ಬಿತ್ತುವ ಮತ್ತು ದುರ್ಬಲಗೊಳಿಸುವ ಇಂತಹ ಕುಚೇಷ್ಟೆಯ ಪ್ರಯತ್ನಗಳನ್ನು ತಡೆದುಕೊಳ್ಳುವಷ್ಟು ಮೈತ್ರಿ ದೃಢವಾಗಿದೆ’ ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಮಿತ್ರ ಪಕ್ಷಗಳು ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿಸಿವೆ. ಬಿಜೆಪಿ ನೇತೃತ್ವದ ಎನ್ಡಿಎಯಿಂದ ಒಡಿಶಾದ ಬುಡಕಟ್ಟು ಮೂಲದ ದ್ರೌಪದಿ ಮುರ್ಮು ಅವರು ಅಭ್ಯರ್ಥಿಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.