ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರ ನಿಯೋಗವೊಂದು ಶನಿವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದು, ಮೈತ್ರಿ ಸರ್ಕಾಉದರದ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳ (ಸಿಎಂಪಿ) ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದೆ.
ಎಐಸಿಸಿ ಕಾರ್ಯದರ್ಶಿ ಎಚ್.ಕೆ.ಪಾಟೀಲ್ ನೇತೃತ್ವದ ನಿಯೋಗದಲ್ಲಿ ಎಂಪಿಸಿಸಿ ಅಧ್ಯಕ್ಷ ನಾನಾ ಪಟೊಲೆ, ಕಂದಾಯ ಸಚಿವ ಮತ್ತು ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ತೋರಟ್, ಸಚಿವ ಅಶೋಕ್ ಚವಾಣ್ ಅವರೂ ಇದ್ದರು.
ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ನಿಯೋಗದ ಭೇಟಿ ಗಮನಸೆಳೆದಿದೆ. ಇದು, ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿಯೂ ಆಗಿರುವ ಎಚ್.ಕೆ.ಪಾಟೀಲ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವಣ ಮೊದಲ ಭೇಟಿಯೂ ಆಗಿದೆ.
ಮೈತ್ರಿ ಸರ್ಕಾರದ ಗೃಹ ಸಚಿವರ ವಿರುದ್ಧ ಮಾಜಿ ಪೊಲೀಸ್ ಕಮಿಷನರ್ ಅವರ ಭ್ರಷ್ಟಾಚಾರ ಆರೋಪ, ರಾಜ್ಯದಲ್ಲಿ ಕಾಣಿಸಿರುವ ಕೋವಿಡ್ ಎರಡನೇ ಅಲೆಯ ಚಿತ್ರಣದ ನಡುವೆ ಈ ಭೇಟಿ ನಡೆದಿದೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಸುಮಾರು ಒಂದು ಗಂಟೆ ಸಭೆ ನಡೆಯಿತು.
ಬುಡಕಟ್ಟು ಜನರು ಮತ್ತು ಬಡವರ ಕಲ್ಯಾಣ ಯೋಜನೆಗಳಿಗೆ ಅನುದಾನ ಬಿಡುಗಡೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂದೆ ಬರೆದಿದ್ದ ಪತ್ರ ಹಾಗೂ ಅನುದಾನ ಹಂಚಿಕೆಯಲ್ಲಿ ಸಚಿವರ ನಡುವೆ ತಾರತಮ್ಯ ಆಗುತ್ತಿದೆ ಎಂಬ ಅಂಶವನ್ನು ಸಿ.ಎಂ ಗಮನಕ್ಕೆ ತಂದಿರುವುದಾಗಿತೋರಟ್ ತಿಳಿಸಿದರು.