ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲೇ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಶುಕ್ರವಾರ ಅಭಿಯಾನ ಆರಂಭಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಜನರು ದನಿಯೆತ್ತಬೇಕು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೊರೊನಾ ಮತ್ತು ದೇಶದ ಹಲವೆಡೆ ಪ್ರವಾಹ ಉಂಟಾಗಿರುವುದರಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಆಗ್ರಹಿಸಿವೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈಗಾಗಲೇ ನಿಗದಿಪಡಿಸಿದಂತೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿತ್ತು.
ಪಕ್ಷದ ಅಭಿಯಾನದ ಭಾಗವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ತೊಂದರೆಗೀಡಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಪರ ದನಿಯೆತ್ತಿ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಾತನಾಡಿ. ಸರ್ಕಾರವು ವಿದ್ಯಾರ್ಥಿಗಳ ಮಾತು ಕೇಳುವಂತೆ ಮಾಡೋಣ’ ಎಂದು ಉಲ್ಲೇಖಿಸಿದ್ದಾರೆ.
‘ಸರ್ಕಾರದ ವೈಫಲ್ಯಗಳಿಂದಾಗಿ ನೀಟ್, ಜೆಇಇ ಅಭ್ಯರ್ಥಿಗಳ ಸುರಕ್ಷತೆಯ ಬಗ್ಗೆ ರಾಜಿ ಮಾಡಿಕೊಳ್ಳಲಾಗದು. ಸರ್ಕಾರವು ಎಲ್ಲ ಬಂಡವಾಳದಾರರ ಮಾತುಗಳನ್ನೂ ಆಲಿಸಬೇಕು. ಒಮ್ಮತಕ್ಕೆ ಬರಬೇಕು’ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
NEET-JEE aspirants’ safety should not compromised due to the failures of the Govt.