ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹ್ಮದ್ ಪಟೇಲ್ | ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌; ತೆರೆಮರೆ ಚಾಣಾಕ್ಷ ಕಣ್ಮರೆ

Last Updated 25 ನವೆಂಬರ್ 2020, 21:12 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಮೂರು ತಲೆಮಾರುಗಳ ಜೊತೆ ಅತ್ಯಾಪ್ತ ಎನಿಸುವ ಒಡನಾಟ ಇಟ್ಟುಕೊಂಡಿದ್ದವರು ಅಹ್ಮದ್ ಪಟೇಲ್. ಕಾಂಗ್ರೆಸ್‌ನ ‘ಮಾಸ್ಟರ್ ಸ್ಟ್ರಾಟೆಜಿಸ್ಟ್’, ‘ಟ್ರಬಲ್ ಶೂಟರ್’ ಎಂಬುದು ಅವರ ಶ್ರೇಯ.

ಅಹ್ಮದ್ ಪಟೇಲ್ ಸ್ವತಃ ಇಂದಿರಾ ಗಾಂಧಿ ಅವರ ನೆಚ್ಚಿನ ಆಯ್ಕೆ. 1977ರಲ್ಲಿ ಪಟೇಲ್ 28 ವರ್ಷದವರಿದ್ದಾಗ ಗುಜರಾತಿನ ಭರೂಚ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದವರು ಇಂದಿರಾ. ತುರ್ತು ಪರಿಸ್ಥಿತಿ ಬಳಿಕ ಜನತಾ ಪಕ್ಷದ ಅಲೆಯನ್ನು ಮೆಟ್ಟಿನಿಂತು ಸಂಸತ್ತಿಗೆ ಆಯ್ಕೆಯಾಗಿದ್ದ ಅಹ್ಮದ್ ಪಟೇಲ್, ಅಂದಿನಿಂದ ಗಾಂಧಿ ಕುಟುಂಬದ ಆಪ್ತ ವಲಯ ಸೇರಿ ಪಕ್ಷದ ಪ್ರಭಾವಿ ನಾಯಕ ಎನಿಸಿಕೊಂಡರು. 1985ರಿಂದ ರಾಜೀವ್ ಗಾಂಧಿ ಅವರ ಆಪ್ತ ಸಹಾಯಕರಾಗಿ, ಬಳಿಕ 2001ರಿಂದ 2017ರ ಅವಧಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

‘ಮರೆಯಲಾಗದ ಒಡನಾಡಿ, ವಿಶ್ವಾಸಾರ್ಹ ಸಹೋದ್ಯೋಗಿ ಮತ್ತು ಒಬ್ಬ ಸ್ನೇಹಿತನನ್ನು ನಾನು ಕಳೆದುಕೊಂಡಿದ್ದೇನೆ’ ಎಂದು ಸೋನಿಯಾ ಗಾಂಧಿ ದುಃಖತಪ್ತರಾಗಿ ನುಡಿದಿದ್ದಾರೆ. ‘ಹರಿತ ಬುದ್ಧಿಮತ್ತೆಯ ಪಟೇಲ್‌, ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ನೀಡಿದ ಕೊಡುಗೆ ಸದಾ ಸ್ಮರಣೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ವೈಯಕ್ತಿಕ ಒಡನಾಟದ ಕಾರಣ, ಪಟೇಲ್ ಅವರ ಸ್ನೇಹಿತರು ಮತ್ತು ಹಿತೈಷಿಗಳ ಜಾಲ ದೊಡ್ಡದಾಗಿ ಬೆಳೆಯಿತು. ಅವರು ಇರಿಸಿಕೊಂಡಿದ್ದ ವೈಯಕ್ತಿಕ ಒಡನಾಡವು ಸಾಕಷ್ಟು ಬಾರಿ ಕಾಂಗ್ರೆಸ್‌ನ ಸಹಾಯಕ್ಕೆ ಬಂದಿದೆ.

ತೆರೆಹಿಂದಿನ ರಾಜಕೀಯ ತಂತ್ರ ನಿಪುಣನೆಂದು ಗುರುತಿಸಿಕೊಂಡಿದ್ದ ಪಟೇಲ್ ಅವರಿಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ2004–2014ರ ಅವಧಿಯಲ್ಲಿ ಸಚಿವ ಸಂಪುಟ ಸೇರಲುಆಹ್ವಾನವಿತ್ತಾದರೂ, ಅದನ್ನು ಬದಿಗೆ ಸರಿಸಿದ್ದರು. ಸಮ್ಮಿಶ್ರ ಸರ್ಕಾರ ಹಳಿ ತಪ್ಪಿದಾಗ ಅದನ್ನು ಸರಿದಾರಿಗೆ ತಂದು ಸರ್ಕಾರವನ್ನು ಸುಭದ್ರಗೊಳಿಸುವ ಹಾದಿಯನ್ನು ಅವರು ಆರಿಸಿಕೊಂಡರು.

ಭಾರತ–ಅಮೆರಿಕ ಅಣು ಒಪ್ಪಂದದ ಕಾರಣ ಎಡಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದು ಮನಮೋಹನ್ ಸಿಂಗ್ ಸರ್ಕಾರ ಅಲುಗಾಡುತ್ತಿದ್ದ ಸಮಯವದು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಲೀಲಾಜಾಲವಾಗಿ ನಿಭಾಯಿಸಿದ ಗರಿಮೆ ಪಟೇಲ್ ಅವರದ್ದು. 2008ರಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲ ದಕ್ಕಿಸಿಕೊಂಡು ಸರ್ಕಾರವನ್ನು ರಕ್ಷಿಸಿ ಸೈ ಎನಿಸಿಕೊಂಡಿದ್ದರು.

ಭರೂಚ್‌ನ ಪಿರಾಮನ್‌ ಗ್ರಾಮದಲ್ಲಿ 1949ರ ಆಗಸ್ಟ್ 21ರಂದು ಜನಿಸಿದ ಪಟೇಲ್ ಅವರನ್ನು ಇಂದಿರಾಗಾಂಧಿ ಸಂಸತ್ತಿಗೆ ಕರೆತಂದರು. ಪಟೇಲ್ ಅಲ್ಲಿಂದ ಪಕ್ಷದ ವಿವಿಧ ಹುದ್ದೆಗಳಿಗೆ ಬಡ್ತಿ ಪಡೆಯುತ್ತಾ ನಡೆದರು. ಗುಜರಾತನ್ನು ಸಂಸತ್ತಿನಲ್ಲಿ ಎಂಟು ಬಾರಿ ಪ್ರತಿನಿಧಿಸಿದ್ದರು. ಮೂರು ಬಾರಿ ಲೋಕಸಭಾ ಸದಸ್ಯರಾಗಿ, ಐದು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹುದ್ದೆಯಿಂದ ಆರಂಭಗೊಂಡ ಅವರ ಪಯಣ, ಗಾಂಧಿ ಕುಟುಂಬದ ಒಡನಾಡಿಯಾಗಿ ನಾಲ್ಕು ದಶಕ ಮುಂದುವರಿಯಿತು. ಪಕ್ಷದ ನಾಡಿಮಿಡಿತವನ್ನು ಬಹು ಚೆನ್ನಾಗಿ ಅರಿತಿದ್ದ ಅವರು, ಉದ್ಭವಿಸಬಹುದಾದ ಬಿಕ್ಕಟ್ಟಗಳನ್ನು ಆರಂಭದಲ್ಲಿಯೇ ಗುರುತಿಸಿ ಅದಕ್ಕೆ ಮುಲಾಮು ಹಚ್ಚಿ ಗುಣಪಡಿಸುವ ಜಾಣ್ಮೆ ಗಳಿಸಿದ್ದರು.

ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡಾಗ ಕೊಂಚ ಅರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಹೀಗಾಗಿ ಪಟೇಲ್ ಅವರನ್ನು 2018ರಲ್ಲಿ ಎಐಸಿಸಿ ಖಜಾಂಚಿ ಆಗಿ ನೇಮಿಸಲಾಗಿತ್ತು. ಪಕ್ಷದಲ್ಲಿ ಏನೇ ಬಿಕ್ಕಟ್ಟು ಎದುರಾದರೂ ಅದನ್ನು ಸರಿಪಡಿಸುವ ಹೊಣೆಯನ್ನು ಅಹ್ಮದ್ ಪಟೇಲ್ ಅವರಿಗೆ ವಹಿಸುವುದು ರೂಢಿಯೇ ಆಗಿತ್ತು.

ಬಿಹಾರ ಚುನಾವಣಾ ಸೋಲು ಮುಂದಿಟ್ಟುಕೊಂಡು ಪಕ್ಷದ ಸಂಘಟನೆ ಹಾಗೂ ನಾಯಕತ್ವ ಬದಲಾವಣೆಗೆ ಹಿರಿಯ ನಾಯಕರು ಆಗ್ರಹಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಟ್ರಬಲ್ ಶೂಟರ್ ಅಹ್ಮದ್ ಪಟೇಲ್ ಅವರ ಅಗಲಿಕೆ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿರುವುದು ಸುಳ್ಳಲ್ಲ.

ನಿದ್ದೆಗೆಡಿಸಿದ್ದ ಚುನಾವಣೆ
ಅಹ್ಮದ್ ಪಟೇಲ್ ಕೊನೆಯ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದು 2017ರಲ್ಲಿ. ಈ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಪಟೇಲ್‌ಗೆ ಸುಲಭಕ್ಕೆ ದಕ್ಕುತ್ತಿದ್ದ ಗೆಲುವನ್ನು ಕಠಿಣ ಹಾದಿಯಾಗಿ ಪರಿವರ್ತಿಸಿದ್ದವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ. ಕಾಂಗ್ರೆಸ್ ಶಾಸಕರು ಅಡ್ಡಮತದಾನ ಮಾಡುವ ಸುಳಿವು ಸಿಕ್ಕಿದ್ದರಿಂದ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರು ಸಮೀಪದ ರೆಸಾರ್ಟ್‌ಗೆ ಕರೆತರಲಾಗಿತ್ತು. ಯಾವೊಬ್ಬ ಶಾಸಕರೂ ಬಿಜೆಪಿಯ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವ ಹೊಣೆಯನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ವಹಿಸಲಾಗಿತ್ತು. ಇದೇ ಸಮಯದಲ್ಲಿ ಶಿವಕುಮಾರ್ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಪಕ್ಷದ ಶಾಸಕರನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಿದ್ದರಿಂದ ಪಟೇಲ್ ಗೆದ್ದು ನಿಟ್ಟುಸಿರು ಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT