ಶುಕ್ರವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೆ ಒಳಪಟ್ಟ 68,575 ಜನರ ಪೈಕಿ ಶೇ 12.40ರ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ.
ಇದೇ ಅವಧಿಯಲ್ಲಿ 289 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕು ಹರಡುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದ್ದರೂ, ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಾರದಿರುವುದು ಆತಂಕವನ್ನು ಹೆಚ್ಚಿಸಿದೆ.
ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ 40ರಿಂದ 50ರಷ್ಟು ಕಡಿಮೆ ಆಗುತ್ತಿದೆಯಾದರೂ, ಕಳೆದ 10 ದಿನಗಳ ಅವಧಿಯಲ್ಲಿ 3,539 ಜನ ಪ್ರಾಣ ಕಳೆದುಕೊಂಡಿದ್ದಾರೆ.
ತಗ್ಗಿದ ಆಮ್ಲಜನಕ ಬೇಡಿಕೆ: ಏಪ್ರಿಲ್ 19ರಿಂದ ಜಾರಿಯಾಗಿರುವ ಲಾಕ್ಡೌನ್ ಪರಿಣಾಮ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಕಡಿವಾಣ ಬಿದ್ದಿದ್ದು, ಸೋಂಕಿನ ಸರಪಳಿ ಬೆಳೆಯದಿರುವುದಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೇಡಿಕೆ ತಗ್ಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ದೊರೆಯದೇ ತಲೆದೋರಿದ್ದ ಹಾಹಾಕಾರವೂ ಕಡಿಮೆಯಾಗಿದೆ.
ಕೊರೊನಾ ಪೀಡಿತರಿಗಾಗಿ ಕೇಂದ್ರ ಸರ್ಕಾರವು ದೆಹಲಿಗೆ ಹಂಚಿಕೆ ಮಾಡಿದ್ದ ಆಮ್ಲಜನಕವನ್ನು ಅಗತ್ಯ ರಾಜ್ಯಗಳಿಗೆ ಪೂರೈಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.