ಭುವನೇಶ್ವರ್: ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಬಾಲಸೋರ್ ಜಿಲ್ಲೆಗೆ ಚಂಡಮಾರುತ ಧರೆಗಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ದೊಡ್ಡ ಪ್ರಮಾಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿದೆ.
ಹವಾಮಾನ ಇಲಾಖೆ ನೀಡಿದ ಮಾಹಿತಿ ಆಧರಿಸಿ, ಒಡಿಶಾದಲ್ಲಿ ಚಂಡಮಾರುತದ ಸಂಭವನೀಯ ಅಪಾಯವನ್ನು ಮನಗಂಡು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಪಿಕೆ ಜೆನಾ ಸುದ್ದಿಗಾರರಿಗೆ ತಿಳಿಸಿದರು.
ಯಸ್ ಚಂಡಮಾರುತ ಧರೆಗಪ್ಪಳಿಸುವ ವೇಳೆ ಸಮುದ್ರದಲ್ಲಿ 2-4.5 ಮೀಟರ್ ಅಲೆಗಳು ಏಳುವ ಮುನ್ಸೂಚನೆ ಇರುವುದರಿಂದ, ಎಲ್ಲಾ ತಗ್ಗು ಪ್ರದೇಶಗಳು ಮತ್ತು ನೀರು ನುಗ್ಗುವ ಪ್ರದೇಶಗಳ ಜನರ ಬೃಹತ್ ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು ಎಂದು ಜೆನಾ ಹೇಳಿದರು.
‘ತಗ್ಗು ಪ್ರದೇಶದ ಜನರ ಸ್ಥಳಾಂತರಿಸುವ ಪ್ರಕ್ರಿಯೆಯು ಈಗಾಗಲೇ ರಾಜ್ಯದಲ್ಲಿ ಪ್ರಾರಂಭವಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳಲಿದೆ. ಚಂಡಮಾರುತದಿಂದ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಹೇಳಿದರು.
ಮಯೂರ್ ಭಂಜ್ ಮತ್ತು ಕಿಯೋಂಜರ್ ಜಿಲ್ಲೆಗಳ ಜೊತೆ ಬಾಲಸೋರ್, ಭದ್ರಾಕ್, ಕೇಂದ್ರಪಾರ ಮತ್ತು ಜಗಸ್ಟಿಂಗ್ಪುರ ಜಿಲ್ಲೆಗಳನ್ನು ಹೆಚ್ಚಿನ ಅಪಾಯದ ವಲಯಗಳಾಗಿ ಗುರುತಿಸಲಾಗಿದೆ.
ಅಲ್ಲದೆ, ಕಟಕ್, ಪುರಿ, ಖುರಾ, ನಾಯಗಢ ಮತ್ತು ಧೆಂಕನಾಲ್ ಜಿಲ್ಲಾಧಿಕಾರಿಗಳನ್ನು ಸಹ ಯಾವುದೇ ಸಂಭವನೀಯ ಅಪಾಯ ಎದುರಿಸಲು ಸಜ್ಜಾಗುವಂತೆ ಸೂಚನೆ ನೀಡಲಾಗಿದೆ.
ರಾಜ್ಯ ಸರ್ಕಾರವು ಈಗಾಗಲೇ ಎನ್ಡಿಆರ್ಎಫ್ನ 22 ತಂಡಗಳು, ಒಡಿಆರ್ಎಎಫ್ನ 50 ತಂಡಗಳು, ಅಗ್ನಿಶಾಮಕ ಸೇವೆಗಳ 150 ಸಿಬ್ಬಂದಿಗಳು ಮತ್ತು 35 ಮರಗಳನ್ನು ಕಡಿಯುವ ತಂಡಗಳನ್ನು ದುರ್ಬಲ ಜಿಲ್ಲೆಗಳಲ್ಲಿ ನಿಯೋಜಿಸಿದೆ ಎಂದು ಜೆನಾ ಹೇಳಿದರು.
ರಾಜ್ಯವು 30 ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ ಎಂದರು.