ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ವಿಕ್ರಂ ಭಾವೆಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
2013ರ ಆಗಸ್ಟ್ 20ರಂದು ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಯಾಗಿತ್ತು.ಇತರ ಇಬ್ಬರು ಆರೋಪಿಗಳಾದ ಸಚಿನ್ ಅಧೂರೆ, ಶರದ್ ಕಲಸ್ಕರ್ರಿಗೆ ನೆರವಾಗಿದ್ದ ಆರೋಪದಡಿ ಭಾವೆಯನ್ನು ಪೊಲೀಸರು ಬಂಧಿಸಿದ್ದರು.
ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂದೆ ಮತ್ತು ಮನೀಶ್ ಪಿತಾಳೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು ₹1 ಲಕ್ಷದ ಶ್ಯೂರಿಟಿ ಬರೆಸಿಕೊಂಡು ಜಾಮೀನು ನೀಡಿದ್ದಾರೆ. ಅಲ್ಲದೆ ಮೊದಲ ತಿಂಗಳಿನಲ್ಲಿ ಪ್ರತಿನಿತ್ಯ ಮತ್ತು ಎರಡನೇ ತಿಂಗಳಿನಲ್ಲಿ ಪ್ರತಿ ಎರಡು ದಿನಗಳಿಗೊಮ್ಮೆ ಪುಣೆಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಪೀಠ ಸೂಚಿಸಿದೆ.
ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮತ್ತು ಯಾವುದೇ ಪುರಾವೆಗಳು ನಾಶ ಮಾಡದಂತೆ ಭಾವೆಗೆ ಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆಯೂ ನೀಡಿದೆ.