ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಲೋಕಸಭಾ ಚುನಾವಣೆ ಕೇಜ್ರಿವಾಲ್‌–ಮೋದಿ ನಡುವಿನ ಯುದ್ಧ: ಸಿಸೋಡಿಯಾ 

Last Updated 20 ಆಗಸ್ಟ್ 2022, 8:27 IST
ಅಕ್ಷರ ಗಾತ್ರ

ನವದೆಹಲಿ:ಕೇಜ್ರಿವಾಲ್‌ ಅವರನ್ನು ಹೆದರಿಸಲು ಮೋದಿ ಎಲ್ಲ ವಿಧಾನಗಳನ್ನು ಬಳಸುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯು ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ನಡೆಯುವ ಯುದ್ಧವಾಗಿರಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮಗಳ ಹಿನ್ನೆಲೆಯಲ್ಲಿ ಸಿಬಿಐ ಅಬಕಾರಿ ಖಾತೆಯನ್ನು ಹೊಂದಿರುವ ಮನೀಶ್‌ ಸಿಸೋಡಿಯಾ ಅವರ ನಿವಾಸ, ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರ ಮತ್ತು ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಹುಶಃ ಮುಂದಿನ 3-4 ದಿನಗಳಲ್ಲಿ ಸಿಬಿಐ-ಇಡಿ ನನ್ನನ್ನು ಬಂಧಿಸಬಹುದು. ಆದರೆ, ನಾವು ಹೆದರುವುದಿಲ್ಲ. ನೀವು ನಮ್ಮನ್ನು ಒಡೆಯಲು ಸಾಧ್ಯವಿಲ್ಲ. 2024ರ ಚುನಾವಣೆಗಳು ಅರವಿಂದ ಕೇಜ್ರಿವಾಲ್‌ ಮತ್ತು ಮೋದಿ ಅವರ ನಡುವೆ ನಡೆಯುವ ಸಮರವಾಗಲಿದೆ’ ಎಂದು ಅವರು ಹೇಳಿದರು.

ಅಮೆರಿಕದ ಅತಿದೊಡ್ಡ ಪತ್ರಿಕೆ ದಿ ನ್ಯೂಯಾರ್ಕ್ ಟೈಮ್ಸ್ ತನ್ನ ಮೊದಲ ಪುಟದಲ್ಲಿ ದೆಹಲಿಯ ಶಿಕ್ಷಣ ಮಾದರಿಯನ್ನು ಪ್ರಕಟಿಸಿದೆ. ಇದು ಭಾರತಕ್ಕೆ ಒಂದು ಹೆಮ್ಮೆ. ಸುಮಾರು ಒಂದೂವರೆ ವರ್ಷಗಳ ಹಿಂದೆ, ಗಂಗಾ ನದಿಯ ಉದ್ದಕ್ಕೂ ಸಾವಿರಾರು ದೇಹಗಳನ್ನು ಸುಡುತ್ತಿರುವುದನ್ನು ತೋರಿಸುವ, ಮತ್ತೊಂದು ವರದಿಯನ್ನು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು. ಇದು ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

ಸಿಬಿಐ ಅಧಿಕಾರಿಗಳು ನನ್ನ ನಿವಾಸಕ್ಕೆ ಬಂದಿದ್ದರು. ಶಿಕ್ಷಣ ಇಲಾಖೆಯ ಕಚೇರಿ ಮೇಲೂ ಅವರು ದಾಳಿ ನಡೆಸಿದ್ದಾರೆ. ಎರಡೂ ಸ್ಥಳಗಳಲ್ಲಿ ದಾಳಿ ನಡೆಸಿದ ಎಲ್ಲ ಅಧಿಕಾರಿಗಳು ಒಳ್ಳೆಯವರು. ಅವರು ಉತ್ತಮ ರೀತಿಯಲ್ಲಿ ವರ್ತಿಸಿದರು. ಆದರೆ, ಅವರು ಹೈಕಮಾಂಡ್‌ನ ಆದೇಶವನ್ನು ಪಾಲಿಸಬೇಕಾಗಿತ್ತು. ನನ್ನ ಕುಟುಂಬಕ್ಕೆ ಯಾವುದೇ ಹಾನಿಯುಂಟು ಮಾಡದ್ದಕ್ಕೆ ಮತ್ತು ಅಧಿಕಾರಿಗಳ ಉತ್ತಮ ವರ್ತನೆಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದರು.

‘ಈಗ ವಿವಾದಕ್ಕೆ ಗುರಿಯಾಗಿರುವ ಅಬಕಾರಿ ನೀತಿಯು, ದೇಶದ ಅತ್ಯುತ್ತಮ ನೀತಿಯಾಗಿದೆ. ನಾವು ಅದನ್ನು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ರೂಪಿಸಿದ್ದೇವೆ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ತಮ್ಮ ನಿಲುವು ಬದಲಾಯಿಸಿ ನೀತಿಯನ್ನು ವಿಫಲಗೊಳಿಸದೇ ಇದ್ದಿದ್ದರೆ ಸರ್ಕಾರಕ್ಕೆ ಪ್ರತಿ ವರ್ಷ ಕನಿಷ್ಠ ₹10,000 ಕೋಟಿ ಆದಾಯ ಸಿಗಲಿತ್ತು’ ಎಂದು ಸಿಸೋಡಿಯಾ ಹೇಳಿದರು.

‘ಅವರ (ಮೋದಿ)ಸಮಸ್ಯೆ ಮದ್ಯ/ಅಬಕಾರಿ ಹಗರಣವಲ್ಲ. ಅವರ ಸಮಸ್ಯೆ ಏನೆಂದರೆ ಅರವಿಂದ್ ಕೇಜ್ರಿವಾಲ್. ನನ್ನ ವಿರುದ್ಧದ ಸಂಪೂರ್ಣ ಪ್ರಕ್ರಿಯೆಗಳು, ನನ್ನ ನಿವಾಸ ಮತ್ತು ಕಚೇರಿ ಮೇಲೆ ದಾಳಿಗಳು, ಅರವಿಂದ್ ಕೇಜ್ರಿವಾಲ್ ಅವರನ್ನು ತಡೆಯುವ ಪ್ರಯತ್ನಗಳೇ ಆಗಿವೆ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ ನಂತರ ಜನರ ಪ್ರೀತಿಯನ್ನು ಗಳಿಸಿದ ಕೇಜ್ರಿವಾಲ್ ಬಗ್ಗೆ ಅವರಿಗೆ ಭಯವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಗುತ್ತಿರುವ ಉತ್ತಮ ಕಾರ್ಯಗಳನ್ನು ನಿಲ್ಲಿಸಲು ಅವರು ಬಯಸುತ್ತಿದ್ದಾರೆ. ಇದು ಜನಾದೇಶ ಪಡೆದಿರುವ ಪ್ರಧಾನಿಗೆ ತಕ್ಕುದಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಒಳ್ಳೆಯ ಕೆಲಸ ಮಾಡುವವರನ್ನು ಕೇಜ್ರಿವಾಲ್ ಮೆಚ್ಚುತ್ತಾರೆ. ಆದರೆ ಮೋದಿ ಅವರು ರಾಜ್ಯ ಸರ್ಕಾರಗಳನ್ನು ಬೀಳಿಸುತ್ತಾರೆ. ಒಳ್ಳೆ ಕೆಲಸ ಮಾಡುವವರನ್ನು ಸಿಬಿಐ ಮತ್ತು ಇಡಿಯಂತಹ ಸಂಸ್ಥೆಗಳಿಂದ ಬೆದರಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT