ನವದೆಹಲಿ: ರೈತರು ಮಾತಿಗೆ ತಪ್ಪಿ ನಡೆಯುತ್ತಿರುವುದು ಜನವರಿ 25ರ ಸಂಜೆಯಿಂದಲೇ ಗಮನಕ್ಕೆ ಬಂದಿತ್ತು ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನ ರಾಷ್ಟ್ರ ರಾಜಧಾನಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಒಪ್ಪಂದದಂತೆ ರ್ಯಾಲಿಯು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಷರತ್ತುಗಳನ್ನು ಪಾಲಿಸದೆ ಹಿಂಸಾಚಾರ ನಡೆಸಲಾಯಿತು. ರೈತ ನಾಯಕರೂ ಹಿಂಸಾಚಾರದಲ್ಲಿ ಭಾಗಿಯಾದರು ಎಂದುಆಯುಕ್ತರು ಹೇಳಿದ್ದಾರೆ.
ಯಾರೆಲ್ಲ ಘಟನೆಯಲ್ಲಿ ಶಾಮೀಲಾಗಿದ್ದಾರೋ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ವೇಳೆ ಹಲವು ಹೆಸರುಗಳು ತಿಳಿಯಲಿವೆ. ಅವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದೂಅವರುಹೇಳಿದ್ದಾರೆ.
ಪೊಲೀಸ್ ಆಯುಕ್ತರು ಹೇಳಿದ್ದು...
‘ರೈತರು ಕೊಟ್ಟ ಮಾತಿನಂತೆ ನಡೆದಿಲ್ಲ’: ‘ಅವರು (ರೈತರು) ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಜನವರಿ 25ರ ಸಂಜೆಯಿಂದಲೇ ಗಮನಕ್ಕೆ ಬಂತು. ಘಾತಕ ಶಕ್ತಿಗಳು ವೇದಿಕೆಗಳನ್ನೇರಿ ಪ್ರಚೋದನಾಕಾರಿ ಭಾಷಣ ಮಾಡಿದರು. ಇದು ಅವರ ಉದ್ದೇಶವನ್ನು ಸ್ಪಷ್ಟಪಡಿಸಿತ್ತು’ ಎಂದು ಅವರು ಹೇಳಿದ್ದಾರೆ.
* ದೆಹಲಿಯ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲವು ಷರತ್ತುಗಳನ್ನು ವಿಧಿಸಿದ್ದೆವು. ಅದನ್ನು ಅವರಿಗೆ (ರೈತರಿಗೆ) ಲಿಖಿತವಾಗಿ ನೀಡಲಾಗಿತ್ತು. ಮಧ್ಯಾಹ್ನ 12ರಿಂದ ಸಂಜೆ 5ರ ಒಳಗೆ ರ್ಯಾಲಿ ಮುಗಿಸುವಂತೆ ಸೂಚಿಸಿದ್ದೆವು. ಇದನ್ನು ರೈತ ಮುಖಂಡರು ಮುನ್ನಡೆಸಬೇಕಿತ್ತು ಮತ್ತು ರೈತ ನಾಯಕರು ತಮ್ಮ ಗುಂಪುಗಳೊಂದಿಗೇ ಹೋಗಬೇಕು ಎಂದು ಸೂಚಿಸಲಾಗಿತ್ತು.
* 5,000ಕ್ಕಿಂತ ಹೆಚ್ಚು ಟ್ರ್ಯಾಕ್ಟರ್ಗಳು ಇರಬಾರದು ಮತ್ತು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸುವವರು ಆಯುಧಗಳನ್ನು ಹೊಂದಿರಬಾರದು ಎಂಬ ಷರತ್ತನ್ನೂ ವಿಧಿಸಲಾಗಿತ್ತು.
* ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚರದಲ್ಲಿ 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕೆಲವರು ತೀವ್ರ ನಿಘಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
* ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿ, ವಿಡಿಯೊ ತುಣುಕುಗಳು ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಬಳಸಲಾಗುತ್ತಿದೆ.
#WATCH live: Delhi Police addresses the media regarding the violence during farmers' tractor rally yesterday. https://t.co/vzt5Umpt4q
— ANI (@ANI) January 27, 2021
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.