ನವದೆಹಲಿ (ಪಿಟಿಐ): ‘ಕೇಂದ್ರ ಸರ್ಕಾರವು ‘ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ’ಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ನೀಡುವ ಬದಲಿಗೆ, ಜಂಟಿ ಸಮಿತಿಗೆ ನೀಡಿದೆ. ಈ ಮೂಲಕ ಸ್ಥಾಯಿ ಸಮಿತಿಯನ್ನು ಅಪಮೌಲ್ಯ ಮತ್ತು ಅವಹೇಳನ ಮಾಡಿದೆ’ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿರುವ ಅವರು, ಈ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಎಂದು ಆಗ್ರಹಿಸಿದ್ದಾರೆ.
‘ಸದನಗಳಲ್ಲಿ ಮಂಡನೆಯಾಗುವ ಮಸೂದೆಗಳ ಪರಿಶೀಲನೆ ಅಗತ್ಯವಿದ್ದರೆ, ಅದನ್ನು ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ನೀಡಲಾಗುತ್ತದೆ. ಆದರೆ, ಸರ್ಕಾರವು ಈ ಮಸೂದೆಯನ್ನು ಜಂಟಿ ಸಮಿತಿಗೆ ನೀಡಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಎಂಟು ಸ್ಥಾಯಿ ಸಮಿತಿಗಳು ಇವೆ. ‘ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸ್ಥಾಯಿ ಸಮಿತಿ’ಗೆ ಜೈರಾಮ್ ರಮೇಶ್ ಅಧ್ಯಕ್ಷರಾಗಿದ್ದಾರೆ.
‘ನಾನು ಕಾಂಗ್ರೆಸ್ ಹಾಗೂ ಎಲ್ಲಾ ವಿರೋಧ ಪಕ್ಷಗಳ ಪರವಾಗಿ ಈ ಪತ್ರ ಬರೆಯುತ್ತಿದ್ದೇನೆ. ಸಂಸದೀಯ ಸ್ಥಾಯಿ ಸಮಿತಿಯ ಶಕ್ತಿಯನ್ನು ಸಂಪೂರ್ಣವಾಗಿ ಕುಂದಿಸುವ ಪ್ರಯತ್ನ ನಡೆಯುತ್ತಿದೆ. ಮಸೂದೆಯ ಪರಿಶೀಲನೆಗಾಗಿ ಲೋಕಸಭೆಯಲ್ಲಿ ಮೊದಲು ಜಂಟಿ ಸಂಸದೀಯ ಸಮಿತಿಗೆ ನೀಡಲಾಯಿತು. ನಂತರ ರಾಜ್ಯಸಭೆಯಲ್ಲಿ ನೀಡಲಾಯಿತು. ಈ ಮಸೂದೆಯು ನಮ್ಮ ಸ್ಥಾಯಿ ಸಮಿತಿಯ ಕಾರ್ಯವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಈ ಮಸೂದೆಯ ಪರಿಶೀಲನೆ ನಡೆಸಲು ಸಂಸದೀಯ ಸ್ಥಾಯಿ ಸಮಿತಿಗೆ ನೀಡಿಲ್ಲ’ ಎಂದು ರಮೇಶ್ ಅವರು ಪತ್ರದಲ್ಲಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.