ನವದೆಹಲಿ: ಲಡಾಖ್ ಗಡಿಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಶಮನಗೊಳಿಸುವ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ವೇ ಫೆಂಗ್ ಶುಕ್ರವಾರ ರಾತ್ರಿರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಎರಡೂವರೆ ತಾಸು ಮಾತುಕತೆ ನಡೆಸಿದರು.
ಲಡಾಖ್ ಗಡಿಯಲ್ಲಿ ಶಾಂತಿ ಮರು ಸ್ಥಾಪಿಸುವ ನಿಟ್ಟಿನಲ್ಲಿ ಚೀನಾ ಮೊದಲುವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಗೌರವಿಸುವುದನ್ನು ಕಲಿಯಲಿಎಂದು ರಾಜನಾಥ್ ಸಿಂಗ್ ನೇರವಾಗಿ ಹೇಳಿದ್ದಾರೆ.
ಗಡಿಯಲ್ಲಿ ನಿಯೋಜಿಸಿರುವ ಸೇನೆಯನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಮತ್ತು ಎಲ್ಎಸಿಯಲ್ಲಿ ಯಥಾಸ್ಥಿತಿ ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ಅವರು ಚೀನಾಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಮಾಸ್ಕೊದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ರಕ್ಷಣಾ ಸಚಿವರ ಸಮಾವೇಶದಲ್ಲಿ ಭಾಗವಹಿಸಿರುವ ಸಿಂಗ್–ಫೆಂಗ್ ಅವರು ಲಡಾಖ್ ಗಡಿ ಸಂಘರ್ಷದ ನಂತರದ ಮೊದಲ ಬಾರಿಗೆ ಮುಖಾಮುಖಿಯಾದರು. ಹಾಗಾಗಿ ಈ ಮಾತುಕತೆ ಸಹಜವಾಗಿ ಕುತೂಹಲ ಕೆರಳಿಸಿತ್ತು.
ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ಆಕ್ರಮಣಶೀಲ ಮನೋಭಾವದ ಬಗ್ಗೆ ಫೆಂಗ್ ಗಮನ ಸೆಳೆದ ಅವರು, ಸದ್ಯಗಡಿ ವಾತಾವರಣ ಮತ್ತಷ್ಟು ಬಿಗಡಾಯಿಸುವಂತಹ ಕ್ರಮಕ್ಕೆ ಎರಡೂ ರಾಷ್ಟ್ರಗಳು ಕೈಹಾಕಬಾರದು ಎಂದು ಸಲಹೆ ಮಾಡಿದ್ದಾರೆ.
ಭಾರತ ತನ್ನ ಸಾರ್ವಭೌಮತೆ ಮತ್ತುಗಡಿ ರಕ್ಷಣೆಗೆ ಬದ್ಧ. ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಎರಡೂ ರಾಷ್ಟ್ರಗಳು ಆದ್ಯತೆ ನೀಡಬೇಕು.ಸದ್ಯಗಡಿಯಲ್ಲಿಯ ಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆಸಿಂಗ್ ಮನವಿ ಮಾಡಿದರು.
ಶಾಂತಿಯುತ ಮಾಗರ್ದಲ್ಲಿ ಪರಿಹಾರ ಕಂಡುಕೊಳ್ಳಲು ಬಯಸುವುದಾಗಿ ಚೀನಾ ಹೇಳಿದೆ ಎಂದು ಶನಿವಾರ ಬಿಡುಗಡೆಯಾದ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ಹೇಳಿದೆ.
ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ರಷ್ಯಾದಲ್ಲಿರುವ ಭಾರತದ ರಾಯಭಾರಿ ಡಿ.ಬಿ. ವೆಂಕಟೇಶ್ ಉನ್ನತ ಮಟ್ಟದ ಮಾತುಕತೆಯಲ್ಲಿ ಭಾಗವಹಿಸಿದ್ದರು.