ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾತನಾಡಿರುವ ಅವರು, 'ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರವು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ದೇಶದ ಇತರೆಡೆಯೂ ಹರಡಬಹುದು' ಎಂದು ತಿಳಿಸಿದ್ದಾರೆ.
ಕೃಷಿ ಮಸೂದೆಗಳ ಬಗೆಗಿನ ದೀರ್ಘ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದರೂ ಕೇಂದ್ರ ಸರ್ಕಾರ ಕಿವಿಗೊಡಲಿಲ್ಲ. ಸಂಸತ್ನಲ್ಲಿ ಮಸೂದೆಗಳನ್ನು ಅವಸರವಾಗಿ ಅಂಗೀಕರಿಸಲಾಯಿತು ಎಂದು ಶರದ್ ಪವಾರ್ ಆರೋಪಿಸಿದ್ದಾರೆ.
'ರೈತರು ಈ ದೇಶದ ಅನ್ನದಾತರು ಎಂಬುದನ್ನು ನಾವು ಮರೆಯಬಾರದು. ಅವರ ತಾಳ್ಮೆಯನ್ನು ಕೇಂದ್ರ ಸರ್ಕಾರ ಪರೀಕ್ಷಿಸಬಾರದು' ಎಂದು ಅವರು ಹೇಳಿದ್ದಾರೆ.
ಎನ್ಸಿಪಿ ಮುಖಂಡ ಶರದ್ ಪವಾರ್ ಅವರು ಕೇಂದ್ರದ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ‘ದೆಹಲಿ ಚಲೊ’ ಪ್ರತಿಭಟನೆ ನಡೆಸುತ್ತಿದ್ದಾರೆ.