ಮುಂಬೈ: ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಗೆ ಸಹಕರಿಸಲು ಸಿದ್ಧವಿರುವುದಾಗಿ ಮಂಗಳವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿರುವ ಮಹಾರಾಷ್ಟ್ರ ಸರ್ಕಾರ, ಈ ವಿಷಯದಲ್ಲಿ ತನಿಖಾ ಸಂಸ್ಥೆ ಸಂಬಂಧವಿಲ್ಲದ ದಾಖಲೆಗಳನ್ನು ಕೇಳುತ್ತಿದೆ‘ ಎಂದು ಹೇಳಿದೆ.
ಅನಿಲ್ ದೇಶ್ಮುಖ್ ಪ್ರಕರಣದ ತನಿಖೆಗೆ ಬೇಕಾದ ಕೆಲವು ದಾಖಲೆಗಳನ್ನು ನೀಡಲು ಮಹಾರಾಷ್ಟ್ರ ನಿರಾಕರಿಸುತ್ತಿದ್ದು, ತನಿಖೆಗೂ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ, ರಾಜ್ಯ ಸರ್ಕಾರ ಮಂಗಳವಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ.
ಕಳೆದ ತಿಂಗಳು ಸಿಬಿಐ ಸಲ್ಲಿಸಿದ ಅರ್ಜಿಯಲ್ಲಿ, ‘ಪೊಲೀಸ್ ವರ್ಗಾವಣೆಯಲ್ಲಿನ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಲು ಕೇಂದ್ರ ತನಿಖಾ ಸಂಸ್ಥೆಗೆ ಅವಕಾಶ ನೀಡುವುದು ಮತ್ತು ವಜಾಗೊಂಡಿರುವ ಮುಂಬೈನ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮರು ನೇಮಕದ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ‘ ಎಂದು ಆರೋಪಿಸಿತ್ತು.