ಚೆನ್ನೈ: ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು 1,000 ವರ್ಷಗಳಷ್ಟು ಹಳೆಯದಾದ 80 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಿದೆ.
'ರಾಜ್ಯ ಸರ್ಕಾರವು ಹಿಂದೂಗಳ ವಿರೋಧಿ ಅಲ್ಲ, ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿಲ್ಲ' ಎಂದು ಸಚಿವ ಪಿ.ಕೆ. ಶೇಖರ್ ಬಾಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಆರು ದೇವಸ್ಥಾನಗಳಿಗೆ ₹ 27.70 ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣ ಮತ್ತು 10 ದೇವಸ್ಥಾನಗಳಲ್ಲಿ ‘ಅನ್ನದಾನ’ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
₹ 11 ಕೋಟಿ ವೆಚ್ಚದಲ್ಲಿ 14 ದೇವಸ್ಥಾನಗಳಲ್ಲಿ ನೂತನ ಅನ್ನದಾನ ಭವನಗಳನ್ನು ನಿರ್ಮಿಸಲಾಗುವುದು ಮತ್ತು ಎಲ್ಲ ಭಕ್ತರಿಗೆ ಪ್ರಸಾದ ನೀಡುವ ಯೋಜನೆಯನ್ನು ಇನ್ನೂ ಐದು ದೇವಸ್ಥಾನಗಳಿಗೆ ವಿಸ್ತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕೋವಿಲ್ ಪಥಗಾಯ್ ಸುಂದರರಾಜ ಪೆರುಮಾಳ್ ದೇವಸ್ಥಾನದಲ್ಲಿ ಬೃಹತ್ ಗೋಶಾಲೆಯನ್ನು ಸ್ಥಾಪಿಸಲಾಗುವುದು ಮತ್ತು ಈ ಯೋಜನೆಗೆ ₹ 20 ಕೋಟಿ ಮೀಸಲಿಡಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ಇಲಾಖೆಯು ಈಗಿರುವ 121 ಗೋಶಾಲೆಗಳನ್ನು 20 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಿದೆ.