ಚೆನ್ನೈ: ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ, ಕೆ.ಅಣ್ಣಾಮಲೈ (37) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈವರೆಗೆ ಅಧ್ಯಕ್ಷರಾಗಿದ್ದ ಎಲ್.ಮುರುಗನ್ ಅವರು ಕೇಂದ್ರ ಸಂಪುಟವನ್ನು ಸೇರಿದ್ದು, ತೆರವಾದ ಸ್ಥಾನಕ್ಕೆ ಇವರನ್ನು ನೇಮಿಸಲಾಗಿದೆ.
ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ಅವರು 2019ರಲ್ಲಿ ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು. 2020ರ ಆಗಸ್ಟ್ ತಿಂಗಳು ಬಿಜೆಪಿಗೆ ಸೇರಿದ್ದು, ಆಗ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು.
ಪ್ರಬಲ ಗೌಂಡರ್ ಸಮುದಾಯಕ್ಕೆ ಸೇರಿದ ಅಣ್ಣಾಮಲೈ ಅವರು ಯುವಜನರನ್ನು ಸೆಳೆಯಲಿದ್ದು, ಕೆಳಹಂತದಿಂದ ಪಕ್ಷವನ್ನು ಬಲಪಡಿಸಲಿದ್ದಾರೆ ಎಂಬ ಆಶಯ ಹಾಗೂ ಗೌಂಡರ್ ಸಮುದಾಯದ ಬೆಂಬಲ ಗಳಿಸುವ ಆಶಯವನ್ನು ಪಕ್ಷ ಹೊಂದಿದೆ.