ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ಜೋಶಿಮಠದಲ್ಲಿ ಬಿರುಕು ಬಿಟ್ಟ ಮನೆಗಳಿಂದ 30 ಕುಟುಂಬಗಳ ಸ್ಥಳಾಂತರ

Last Updated 5 ಜನವರಿ 2023, 22:28 IST
ಅಕ್ಷರ ಗಾತ್ರ

ಗೋಪೇಶ್ವರ (ಉತ್ತರಾಖಂಡ): ಹಿಮಾಲಯ ಪ್ರದೇಶದಲ್ಲಿ ಭೂಮಿಯ ಕಂಪನಗಳಿಂದ ಹಲವು ಮನೆಗಳು ಬಿರುಕು ಬಿಟ್ಟ ಪರಿಣಾಮ ಇಲ್ಲಿನ ಜೋಶಿಮಠದ ಸುಮಾರು 30 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 6,000 ಅಡಿ ಎತ್ತರದಲ್ಲಿ ಈ ಪಟ್ಟಣ ಇದೆ. ಇದು ಬದರಿನಾಥ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೋಗುವ ಮಾರ್ಗದಲ್ಲಿದ್ದು, ಈ ಪ್ರದೇಶವನ್ನು ಹೆಚ್ಚಿನ ಅಪಾಯದ ಭೂಕಂಪನದ ‘ವಲಯ–ವಿ’ ಎಂದು ಗುರುತಿಸಲಾಗಿದೆ.

ಇಲ್ಲಿನ ರವಿಗ್ರಾಮದಲ್ಲಿ 153, ಗಾಂಧಿನಗರದಲ್ಲಿ 127, ಮನೋಹರಬಾಗ್‌ನಲ್ಲಿ 71, ಸಿಂಗ್‌ಧಾರ್‌ನಲ್ಲಿ 52, ಪರ್ಸಾರಿಯಲ್ಲಿ 50, ‘ಅಪ್ಪರ್‌ ಬಜಾರ್‌’ನಲ್ಲಿ 19, ಸುನೀಲ್‌ನಲ್ಲಿ 27, ಮಾರ್ವಾಡಿಯಲ್ಲಿ 28, ‘ಲೋವರ್‌ ಬಜಾರ್‌’ನಲ್ಲಿ 24 ಮನೆಗಳು ಬಿರುಕು ಬಿಟ್ಟಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್‌.ಕೆ.ಜೋಶಿ ತಿಳಿಸಿದ್ದಾರೆ.

ತೀವ್ರ ಹಾನಿಗೊಳಗಾದ ಮನೆಗಳಿಂದ 29 ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಕುಟುಂಬಗಳನ್ನು ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

‘ಜೋಶಿಮಠದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಅಪಾಯದ ಭೂಕಂಪನದ ‘ವಲಯ–ವಿ’ ಪ್ರದೇಶದ ಸಮೀಕ್ಷೆ ನಡೆಸಲು ತಜ್ಞರ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಪ್ರತಿಭಟನೆ: ಬಿರುಕು ಬಿಟ್ಟ ಮನೆಗಳಿಂದ ಜನರನ್ನು ಸ್ಥಳಾಂತರಿಸುವ ಸರ್ಕಾರ ಪ್ರಕ್ರಿಯೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸರ್ಕಾರ ಕೈಗೊಂಡಿರುವ ಎನ್‌ಟಿಪಿಸಿ ಯೋಜನೆಗಳಿಂದ ಈ ದುಸ್ಥಿತಿ ಬಂದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT