ಲಕ್ನೋ: ಚಿರತೆಯೊಂದರಿಂದ ತಂದೆಯೊಬ್ಬ ಮಗನನ್ನು ಕಾಪಾಡಿದ ಘಟನೆ ಉತ್ತರ ಪ್ರದೇಶದ ಲಖಿಂಪುರ್ ವ್ಯಾಪ್ತಿಯ ದುದ್ವಾ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿರುವುದು ವರದಿಯಾಗಿದೆ.
ಚಿರತೆಯಿಂದ ದಾಳಿಗೊಳಗಾದ ಬಾಲಕನನ್ನು ಸಂದೀಪ್ (14) ಎಂದು ಗುರುತಿಸಲಾಗಿದೆ.
ದುದ್ವಾ ಅರಣ್ಯ ವ್ಯಾಪ್ತಿಯ ಹಳ್ಳಿಯಲ್ಲಿ ವಾಸವಾಗಿದ್ದ ಬಾಲಕ ಮನೆಯ ಬಳಿ ನಿಂತಿದ್ದಾಗ ಚಿರತೆಯೊಂದು ದಾಳಿ ಮಾಡಿ ಅವನನ್ನು ಹೊತ್ತೊಯ್ಯಲು ನೋಡಿದೆ. ಕೂಡಲೇ ಚಿರತೆ ಮೇಲೆ ದಾಳಿ ಮಾಡಿದ ಸಂದೀಪ್ ತಂದೆ ರಾಧೆ ಯಾದವ್, ಚಿರತೆಯಿಂದ ಮಗನನ್ನು ಕಾಪಾಡಲು ಯಶಸ್ವಿಯಾಗಿದ್ದಾರೆ.
‘ಬಾಲಕನನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾನೆ‘ ಎಂದು ವೈದ್ಯರು ತಿಳಿಸಿದ್ದಾರೆ.
‘ಇದೇ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ವ್ಯಕ್ತಿಯೊಬ್ಬನನ್ನು ಚಿರತೆ ಹೊತ್ತೊಯ್ದಿತ್ತು. ಅದೇ ಚಿರತೆ ಮತ್ತೆ ಮಾನವರ ಮೇಲೆ ದಾಳಿ ಮಾಡಿರಬಹುದು. ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಲಾಗುವುದು‘ ಎಂದು ದುದ್ವಾ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.