ಶ್ರೀನಗರ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯ ವಿಮಾನ ಹಾರಾಟ ಯಶಸ್ವಿಯಾಗಿದೆ ಎಂದು ವಿಮಾನಯಾನ ಸಂಸ್ಥೆ ಶನಿವಾರ ತಿಳಿಸಿದೆ.
ಶೇಖ್ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಗೋಏರ್ ವಿಮಾನ ದೆಹಲಿಗೆ ಯಶಸ್ವಿಯಾಗಿ ಹಾರಾಟ ನಡೆಸಿತು. ಇದು ರಾತ್ರಿ ವೇಳೆಯ ಮೊದಲ ವಿಮಾನ ಹಾರಾಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಏರ್ ವಿಮಾನ ರಾತ್ರಿ 7.15 ಕ್ಕೆ ಇಲ್ಲಿಂದ ದೇಶದ ರಾಜಧಾನಿ ನವದೆಹಲಿಗೆ ತೆರಳಿತು. ಈ ವೇಳೆ ಕೈಗಾರಿಕೆ ಮತ್ತು ವಾಣಿಜ್ಯ ಪ್ರಧಾನ ಕಾರ್ಯದರ್ಶಿ ರಂಜನ್ ಪ್ರಕಾಶ್ ಠಾಕೂರ್ ವಿಮಾನದ ಸಿಬ್ಬಂದಿಗೆ ಶುಭ ಕೋರಿದರು.
ಕೆಲವು ತಿಂಗಳುಗಳಿಂದ ಭದ್ರತೆ ಹಾಗೂ ಪ್ರತಿಕೂಲ ಹವಾಮಾನದ ಕಾರಣ ರಾತ್ರಿ ಸಮಯದಲ್ಲಿ ವಿಮಾನ ಹಾರಟವನ್ನು ನಿಷೇಧಿಸಲಾಗಿತ್ತು. ವಿಮಾನಯಾನ ನಿರ್ದೇಶನಾಲಯದ ಅಂತಿಮ ಅನುಮೋದನೆಯ ಬಳಿಕ ವಿಮಾನಗಳು ರಾತ್ರಿ ವೇಳೆಯಲ್ಲಿ ಹಾರಾಟ ನಡೆಸುವ ಸಾಧ್ಯತೆಗಳಿವೆ.