ಗುವಾಹಟಿ: ಮಣಿಪುರ ವಿಧಾನಸಭೆಗೆ ಸೋಮವಾರ ಮೊದಲ ಹಂತದ ಮತದಾನ ನಡೆಯಲಿದೆ. 38 ಕ್ಷೇತ್ರಗಳಿಗೆ ನಡೆಯುವ ಮತದಾನವು 173 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಐದು ಜಿಲ್ಲೆಗಳಾದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ವಿಷ್ಣುಪುರ, ಕಂಗ್ಪೋಕಪಿ ಮತ್ತು ಚುರಾಚಾಂದ್ಪುರಗಳಲ್ಲಿ 12 ಲಕ್ಷ ಜನರು ಮತ ಚಲಾಯಿಸಲಿದ್ದಾರೆ. 1,721 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಬಿಜೆಪಿ–ಜೆಡಿಯು ಮೈತ್ರಿಕೂಟ, ಎನ್ಪಿಪಿ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 2017ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದಾಗ, ಎನ್ಪಿಪಿ ಸರ್ಕಾರವನ್ನು ಬೆಂಬಲಿಸಿತ್ತು. ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಎಲ್ಲ ಪಕ್ಷಗಳು ಬಯಸಿವೆ. ಕಾಂಗ್ರೆಸ್ ಪಕ್ಷವು ರಾಜ್ಯದ ಐದು ಸಣ್ಣ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಧುಮುಕಿದೆ.
60 ಸದಸ್ಯಬಲದ ವಿಧಾನಸಭೆಯ ಉಳಿದ 22 ಕ್ಷೇತ್ರಗಳಿಗೆ ಮಾರ್ಚ್ 5ರಂದು ಮತದಾನ ನಡೆಯಲಿದೆ.
ಗುಂಡಿನ ಸದ್ದು:ಚುನಾವಣೆಗೂ ಮುನ್ನ ರಾಜ್ಯದಲ್ಲಿ ಗುಂಡಿನ ಸದ್ದು ಕೇಳಿದೆ.ಕ್ಷೇತ್ರಿಗಾವ್ ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದಿರುವವಾಂಗ್ಲೆಬಮ್ ರೋಹಿತ್ ಸಿಂಗ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.ಶನಿವಾರ ತಡರಾತ್ರಿ 12.30ರ ಸಮಯದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ನಹರುಪ್ ಮಖಾಪಟ್ ಎಂಬಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾಗ ದಾಳಿ ನಡೆದಿದೆ. ಎದೆಯಲ್ಲಿ ಗುಂಡು ಹೊಕ್ಕಿರುವ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ನಡೆಯುವುದಕ್ಕೆ ಕೆಲವೇ ಗಂಟೆಗಳ ಮುನ್ನ, ಚುರಾಚಾಂದ್ಪುರ ಜಿಲ್ಲೆಯ ಗಂಗ್ಪಿಮುಲ್ ಗ್ರಾಮದಲ್ಲಿ ಸ್ಫೋಟ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ. ಕಚ್ಚಾಬಾಂಬ್ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ.