ನವದೆಹಲಿ (ಪಿಟಿಐ): ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯು ಭಯೋತ್ಪಾದನಾ ಕೃತ್ಯಕ್ಕಾಗಿ ಹಲವೆಡೆ ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ಹಾಗೂ ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಯತ್ನಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಭಾನುವಾರ ಎರಡು ರಾಜ್ಯಗಳ ಒಟ್ಟು 40 ಸ್ಥಳಗಳಲ್ಲಿ ಶೋಧ ನಡೆಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ತೆಲಂಗಾಣದ 38 ಹಾಗೂ ಆಂಧ್ರಪ್ರದೇಶದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಡಿಜಿಟಲ್ ಸಾಧನಗಳು, ದಾಖಲೆಗಳು, ಎರಡು ಕಠಾರಿ ಹಾಗೂ ₹8.31 ಲಕ್ಷ ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಎನ್ಐಎ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
‘ಜುಲೈ 4ರಂದು ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ರಾಜ್ಯ ಪೊಲೀಸರು ಅಬ್ದುಲ್ ಖಾದರ್, ಶೇಖ್ ಸಹಾದುಲ್ಲಾ, ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಎಂಬುವವರನ್ನು ಬಂಧಿಸಿದ್ದರು.ಆಗಸ್ಟ್ 26ರಂದು ಎನ್ಐಎಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
‘ತೆಲಂಗಾಣದ ನಿಜಾಮಾಬಾದ್ನ 23, ಜಗಿತ್ಯಾಲ್ನ 7, ಹೈದರಾಬಾದ್ನ 4, ನಿರ್ಮಲ್ನ 2 ಮತ್ತು ಆದಿಲಾಬಾದ್ ಮತ್ತು ಕರೀಂನಗರ ಜಿಲ್ಲೆಗಳ ತಲಾ ಒಂದು ಸ್ಥಳಗಳಲ್ಲಿ ಶೋಧಕಾರ್ಯ ಕೈಗೊಳ್ಳಲಾಗಿತ್ತು. ಆಂಧ್ರಪ್ರದೇಶದ ಕರ್ನೂಲ್ ಹಾಗೂ ನೆಲ್ಲೂರು ಜಿಲ್ಲೆಯ ತಲಾ ಒಂದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ’ ಎಂದಿದ್ದಾರೆ.