ಗಾಂಧಿ ವಿಚಾರಧಾರೆಗಳು ಮಾತ್ರ ದೇಶಕ್ಕೆ ಸರಿಯಾದ ದಿಕ್ಕು ತೋರಿಸಲಿವೆ: ಸ್ಟ್ಯಾಲಿನ್

ಚೆನ್ನೈ: ‘ದೇಶದಲ್ಲಿ ಜಾತಿ, ಮತ, ಪಂಥಗಳು ರಾರಾಜಿಸುತ್ತಿರುವ ಈ ಸಂದರ್ಭದಲ್ಲಿ ಗಾಂಧಿ ವಿಚಾರಧಾರೆಗಳು ಮಾತ್ರ ದೇಶಕ್ಕೆ ಸರಿಯಾದ ದಿಕ್ಕನ್ನು ತೋರಿಸುತ್ತವೆ‘ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್ ಹೇಳಿದರು.
ಇಲ್ಲಿನ ಸೇಂಟ್ ಜಾರ್ಜ್ ಕೋಟೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ, ರಾಜ್ಯವನ್ನುದ್ದೇಶಿಸಿ ಅವರು ಮಾತನಾಡಿದರು.
‘ಇಂದಿನ ಯುವಕರ ತಲೆಯಲ್ಲಿ ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾವು ಮಹಾತ್ಮಾ ಗಾಂಧೀಜಿ ಅವರ ವಿಚಾರಧಾರೆಗಳನ್ನು ಅವರ ತಲೆಯಲ್ಲಿ ಬಿತ್ತಬೇಕು‘ ಎಂದು ಅಭಿಪ್ರಯಾಪಟ್ಟರು.
‘ತಮಿಳುನಾಡಿಗೆ 20 ಸಾರಿ ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಭೇಟಿ ನೀಡಿದ್ದರು. ಅವರು ಒಂದು ಸಾರಿ ಮಧುರೈಗೆ ಭೇಟಿ ನೀಡಿದ್ದಾಗ ಅಲ್ಲಿನ ಬಟ್ಟೆ ಇಲ್ಲದ ಬಡವರನ್ನು ಕಂಡು ತಾವು ಕೂಡ ಸರಳತೆ ಅನುಸರಿಸಿದರು. ಅವರ ನೆನಪಿಗಾಗಿ ಮುಂಬರುವ ದಿನಗಳಲ್ಲಿ ಮಧುರೈನಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ವಸ್ತು ಸಂಗ್ರಾಹಲಯ ಸ್ಥಾಪಿಸಲು ಯೋಜಿಸಲಾಗಿದೆ‘ ಎಂದು ಹೇಳಿದರು.
ಅಲ್ಲದೇ ಇದೇ ವೇಳೆ ಸ್ಟ್ಯಾಲಿನ್ ಅವರು, ‘ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು ₹17,000 ದಿಂದ ₹18,000 ಕ್ಕೆ ಹೆಚ್ಚಿಸಿದ್ದೇವೆ. ಒಂದು ವೇಳೆ ಅವರು ಮೃತರಾದಲ್ಲಿ ಅವರ ಕುಟುಂಬಗಳಿಗೆ ನೀಡುತ್ತಿದ್ದ ಪಿಂಚಣಿಯನ್ನು ₹8,500 ರಿಂದ ₹9,000 ಕ್ಕೆ ಹೆಚ್ಚಿಸಲಾಗಿದೆ‘ ಎಂದು ಘೋಷಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.