ಗುವಾಹಟಿ: ಅಸ್ಸಾಂ ಮತ್ತು ಮಿಜೋರಾಂ ಗಡಿಭಾಗದಲ್ಲಿನ ಹಿಂಸಾಚಾರದ ಕಾರಣಕ್ಕಾಗಿ ಇಲ್ಲಿನ ಎನ್ಎಚ್–306ನಲ್ಲಿ ಜುಲೈ 26ರಿಂದ ತಡೆಯಲಾಗಿದ್ದ ಸರಕು ಸಾಗಣೆ ಟ್ರಕ್ಗಳಿಗೆ ಮಿಜೋರಾಂಗೆ ತೆರಳಲು ಶನಿವಾರ ರಾತ್ರಿ ಅವಕಾಶ ಮಾಡಿಕೊಡಲಾಗಿದೆ.
ಹಿಂಸಾಚಾರದ ಕಾರಣಕ್ಕಾಗಿ ಗಡಿಭಾಗದ ದಕ್ಷಿಣ ಅಸ್ಸಾಂನ ಕಚಾರ್ ಜಿಲ್ಲೆಯ ಸ್ಥಳೀಯರು ಉದ್ರಿಕ್ತಗೊಂಡಿದ್ದರು. ಅಸ್ಸಾಂನ ಅರಣ್ಯ ಮತ್ತು ಪರಿಸರ ಸಚಿವ ಪರಿಮಳ್ ಸುಕ್ಲಬೈದ್ಯ ಹಾಗೂ ನಗರಭಿವೃದ್ಧಿ ಸಚಿವ ಅಶೋಕ್ ಸಿಂಘಾಲ್ ಅವರು ಸ್ಥಳೀಯರನ್ನು ಸಮಾಧಾನಪಡಿಸಿದ ನಂತರ ಟ್ರಕ್ಗಳ ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು.
ಶನಿವಾರ ರಾತ್ರಿ 9 ಟ್ರಕ್ಗಳು ಮಿಜೋರಾಂಗೆ ಪ್ರಯಾಣ ಬೆಳೆಸಿದವು. ಭಾನುವಾರ ಸಂಜೆಯ ವೇಳೆಗೆ ಸುಮಾರು 50 ಟ್ರಕ್ಗಳು ಮಿಜೋರಾಂಗೆ ತಲುಪಿದವು ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಅಸ್ಸಾಂನ ಕಚಾರ್ ಜಿಲ್ಲೆಯ ಲೈಲಾಪುರ ಮತ್ತು ಮಿಜೋರಾಂನ ಕೊಲಸಿಬ್ ಜಿಲ್ಲೆಯ ವೈರೆಂಗ್ಟೆ ನಡುವಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಅಸ್ಸಾಂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ಮಿಜೋರಾಂನ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಅಸ್ಸಾಂನ ಆರು ಪೊಲೀಸರು ಸೇರಿದಂತೆ ಒಬ್ಬ ನಾಗರಿಕ ಸಾವಿಗೀಡಾಗಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಗಡಿ ಪ್ರದೇಶದ ವಿಚಾರಕ್ಕೆ ಸಂಬಂಧಿಸಿದಂತೆ ಈ ಗುಂಡಿನ ದಾಳಿ ನಡೆದಿತ್ತು. ದಾಳಿಯನ್ನು ವಿರೋಧಿಸಿ ಕಚಾರ್ ಜಿಲ್ಲೆಯ ಲೈಲಾಪುರ ಗ್ರಾಮದ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಟ್ರಕ್ಗಳ ಪ್ರಯಾಣಕ್ಕೆ ತಡೆಯುಂಟಾಗಿತ್ತು.