ನವದೆಹಲಿ: ಕೆನಡಾದಲ್ಲಿ ದ್ವೇಷ ಪ್ರೇರಿತ ಅಪರಾಧಗಳು, ಮತೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಕೆನಡಾದಲ್ಲಿರುವ ಭಾರತೀಯ ಪ್ರಜೆಗಳಿಗೆ ಸಲಹೆ–ಸೂಚನೆ ನೀಡಿದೆ.
‘ಸಚಿವಾಲಯ ಮತ್ತು ಕೆನಡಾದಲ್ಲಿನ ಹೈ ಕಮಿಷನ್/ಕಾನ್ಸುಲೇಟ್ ಜನರಲ್ ಕೆನಡಾದ ಈ ವಿಷಯವನ್ನು ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದ್ದಾರೆ. ಅಪರಾಧಗಳ ಕುರಿತು ತನಿಖೆ ಮಾಡುವಂತೆಯೂ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ವಿನಂತಿಸಿದ್ದಾರೆ’ ಎಂದು ಸರ್ಕಾರ ಹೇಳಿದೆ.
‘ಅಪರಾಧಿಗಳನ್ನು ಇಲ್ಲಿಯವರೆಗೆ ನ್ಯಾಯಾಂಗದ ಎದುರು ನಿಲ್ಲಿಸಲಾಗಿಲ್ಲ’ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.
ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು, ಶಿಕ್ಷಣ, ಪ್ರವಾಸ ಇನ್ನಿತರೆ ಕಾರಣಕ್ಕೆ ಕೆನಡಾಕ್ಕೆ ತೆರಳುತ್ತಿರುವವರು ಎಚ್ಚರಿಕೆ ವಹಿಸುವಂತೆಯೂ, ಜಾಗರೂಕರಾಗಿರುವಂತೆಯೂ ಸೂಚಿಸಲಾಗಿದೆ.
ಭಾರತೀಯ ಪ್ರಜೆಗಳು ಒಟ್ಟಾವದಲ್ಲಿರುವ ಹೈಕಮಿಷನ್ ಕಚೇರಿ, ಟೊರೊಂಟೊ, ವ್ಯಾಂಕೋವರ್ನಲ್ಲಿರುವ ಕನ್ಸುಲೇಟ್ ಜನರಲ್ ಕಚೇರಿಯಲ್ಲಿ ಅಥವಾ madad.gov.inನ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
‘ತುರ್ತು ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಬಳಿ ನೋಂದಾಯಿಸಿಕೊಳ್ಳುವುದು ಸೂಕ್ತ’ ಎಂದು ಸರ್ಕಾರ ಹೇಳಿದೆ.
ಕೆಲ ದಿನಗಳ ಹಿಂದೆ ಟೊರೊಂಟೊದ ಸ್ವಾಮಿನಾರಾಯಣ ದೇಗುಲದ ಮೇಲೆ ಖಾಲಿಸ್ತಾನ ಉಗ್ರರು ಭಾರತ ವಿರೋಧಿ ಬರಹ ಬರೆದು ವಿರೂಪಗೊಳಿಸಿದ್ದರು. ಇದು ವ್ಯಾಪಕ ಖಂಡನೆಗೆ ಗುರಿಯಾಗಿತ್ತು.
There has been a sharp increase in incidents of hate crimes, sectarian violence & anti-India activities in Canada. MEA & our High Commission/Consulates General in Canada have taken up these incidents with Canadian authorities & requested probe & appropriate action: MEA pic.twitter.com/UatussXqH3