ಹೈದರಾಬಾದ್: ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹೈದರಾಬಾದ್ನ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ತೆಲಂಗಾಣ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿಯು ಮಳೆಯ ಅಂಕಿ ಅಂಶಗಳನ್ನು ನೀಡಿದೆ. ಇದರ ಪ್ರಕಾರ ಸರೂರುನಗರದಲ್ಲಿರುವ ಲಿಂಗೋಜಿಗುಡ ವಾರ್ಡ್ ಕಚೇರಿಯಲ್ಲಿ 131.5 ಮಿಮೀ ಮಳೆಯಾಗಿದೆ. ಶುಕ್ರವಾರ ರಾತ್ರಿ 8.30ರಿಂದ ಶನಿವಾರ ಬೆಳಿಗ್ಗೆ 6 ಗಂಟೆಗಳ ಅವಧಿಯಲ್ಲಿ ಇಲ್ಲಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ನಿರಂತರ ಮಳೆಯಿಂದ ಹಯಾತ್ ನಗರದ ವಿವಿಧ ವಸತಿ ಕಾಲೋನಿಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದೆ. ಕೆಲವು ನಿವಾಸಿಗಳ ಗೃಹದಲ್ಲಿನ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಚಿಂತಾಲ್ಕುಂಟಾದಲ್ಲಿ ಶುಕ್ರವಾರ ತಡರಾತ್ರಿ ವ್ಯಕ್ತಿಯೊಬ್ಬ ಬೈಕ್ ಸಮೇತ ಒಳಚರಂಡಿಗೆ ಬಿದ್ದಿದ್ದಾನೆ. ರಕ್ಷಣಾ ಸಿಬ್ಬಂದಿ ನಡೆಸಿದ ಪ್ರಯತ್ನದಿಂದ ವ್ಯಕ್ತಿಯನ್ನು ರಕ್ಷಿಸಲಾಗಿದ್ದು ಆತ ಸುರಕ್ಷಿತವಾಗಿ ಮನೆ ತಲುಪಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಚಿತ್ರಮಂದಿರದ ಗೋಡೆ ಕುಸಿದು ಅಲ್ಲಿ ನಿಲ್ಲಿಸಿದ್ದ ಹಲವು ದ್ವಿಚಕ್ರ ವಾಹನಗಳು ಹಾನಿಗೀಡಾಗಿವೆ.
ಹಗಲಿನ ವೇಳೆ ಭಾರಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿರಬೇಕು. ನಾಗರಿಕರು ತುರ್ತು ಕೆಲಸವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ಹೈದರಾಬಾದ್ ಪಾಲಿಕೆಯು ಶನಿವಾರ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದೆ.
ತೆಲಂಗಾಣದ ಹಲವು ಸ್ಥಳಗಳಲ್ಲಿ ಉತ್ತಮ ಮಳೆಯಾಗಿದೆ. ರಂಗ ರೆಡ್ಡಿ ಜಿಲ್ಲೆಯ ಸರೌನಗರದಲ್ಲಿ 15 ಸೆಂ.ಮೀ., ಶಾಡ್ನಗರದಲ್ಲಿ 10 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.