ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 26ರಂದು ಹಿಂಸಾಚಾರ: ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ರೈತರ ಒತ್ತಾಯ

Last Updated 13 ಫೆಬ್ರುವರಿ 2021, 15:00 IST
ಅಕ್ಷರ ಗಾತ್ರ

ನವದೆಹಲಿ: ಜನವರಿ 26 ಗಣರಾಜ್ಯೋತ್ಸವ ದಿನದಂದುದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್‌ ರ‍್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ರೈತ ಸಂಘಟನೆಗಳು ಶನಿವಾರ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿವೆ. ಅಲ್ಲದೆ ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ಹೊರಿಸಲಾಗಿದೆ ಎಂದು ದೂರಿವೆ.

ಈ ಕುರಿತು ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ನೋಟಿಸ್ ಪಡೆಯುತ್ತಿರುವ ರೈತರು ನೇರವಾಗಿ ಅವರ ಮುಂದೆ ಹಾಜರಾಗಬೇಡಿ. ಬದಲಾಗಿ, ಯಾವುದೇ ಸಹಾಯಕ್ಕಾಗಿ ರೈತ ಸಂಘಗಳು ರಚಿಸಿರುವ ಕಾನೂನು ಕೋಶವನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

ಜನವರಿ 26ರ ಹಿಂಸಾಚಾರ ಮತ್ತು ರೈತರ ವಿರುದ್ಧದ 'ಸುಳ್ಳು ಪ್ರಕರಣಗಳ' ಹಿಂದಿನ 'ಪಿತೂರಿ' ಯನ್ನು ಬಿಚ್ಚಿಡುವ ಘಟನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ತನಿಖೆ ನಡೆಸಬೇಕು ಎಂದು ಎಸ್‌ಕೆಎಂನ ಕಾನೂನು ಕೋಶದ ಸದಸ್ಯ ಕುಲದೀಪ್ ಸಿಂಗ್ಮನವಿ ಮಾಡಿದ್ದಾರೆ.

ಎಸ್‌ಕೆಎಂ ನಾಯಕರ ಪ್ರಕಾರ, ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಿದ್ದ 16 ರೈತರು ಇನ್ನೂ ಪತ್ತೆಯಾಗಿಲ್ಲ.
ಮತ್ತೋರ್ವ ನಾಯಕ ರವೀಂದ್ರ ಸಿಂಗ್ ಮಾತನಾಡಿ, 44 ಎಫ್‌ಐಆರ್‌ಗಳಲ್ಲಿ 14 ಪ್ರಕರಣಗಳಿಗೆ ಸಂಬಂಧಿಸಿದಂತೆ 122 ರೈತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಎಲ್ಲ ರೈತರಿಗೆ ಎಸ್‌ಕೆಎಂ ಕಾನೂನು ಮತ್ತು ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.

ರೈತರ ಮೇಲೆ 'ಸುಳ್ಳು' ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಮೋರ್ಚಾ ನಾಯಕರು ಆರೋಪಿಸಿದರು ಮತ್ತು ಅವರಿಗೆ 'ಕಿರುಕುಳ' ನೀಡಲೆಂದು ದರೋಡೆ ಮತ್ತು ಮತ್ತು ಕೊಲೆ ಯತ್ನಗಳಂತ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಜೈಲಿನ ಕ್ಯಾಂಟೀನ್‌ನಲ್ಲಿ ಖರ್ಚು ಮಾಡಲು ಬಂಧಿತ ಪ್ರತಿಯೊಬ್ಬ ರೈತನಿಗೆ ₹ 2,000 ಹಣವನ್ನು ನೀಡಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿಯ ಮೂರು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT