ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸೋಮವಾರ, ದೆಹಲಿ ಬಿಜೆಪಿಯ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾರನ್ನು ಪಂಜಾಬ್ ಪೊಲೀಸರು 'ರಾಜಕೀಯ ವೈಷಮ್ಯ'ದ ಅಡಿಯಲ್ಲಿ ಬಂಧಿಸಿದ್ದಾರೆ. ರಾಜ್ಯ ಪೊಲೀಸರ ಮೂಲಕ ವೈಯಕ್ತಿಕ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುವುದು 'ತಪ್ಪು' ಎಂದು ಹೇಳಿದ್ದಾರೆ.
ಸುಮಾರು 50 ಪಂಜಾಬ್ ಪೊಲೀಸರು ಬೆಳಿಗ್ಗೆ 8.30 ರ ಸುಮಾರಿಗೆ ಬಗ್ಗಾ ಅವರ ದೆಹಲಿ ನಿವಾಸಕ್ಕೆ ನುಗ್ಗಿ ಅವರನ್ನು ಬಂಧಿಸಿದ್ದಾರೆ ಎಂದು ದೆಹಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಹೇಳಿದ್ದಾರೆ. 'ಅವರು ತಮ್ಮ ಪೇಟವನ್ನು ಕೂಡ ಧರಿಸಲು ಬಿಟ್ಟಿಲ್ಲ' ಎಂದು ಅವರು ಆರೋಪಿಸಿದ್ದಾರೆ.
'ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಬೇರೆ ಪಕ್ಷದವರಾಗಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಕೂಡ ಹೊಂದಿರಬಹುದು. ಆದರೆ ಪಂಜಾಬ್ ಪೊಲೀಸರ ಮೂಲಕ ಅರವಿಂದ್ ಕೇಜ್ರಿವಾಲ್ ಮತ್ತು ಮುಖ್ಯಮಂತ್ರಿ ಭಗವಂತ ಮಾನ್ ಅವರು ರಾಜಕೀಯ ವೈಷಮ್ಯದ ದೃಷ್ಠಿಯಿಂದ ಈ ರೀತಿ ಮಾಡುವುದು ಮಹಾಪಾಪವಾಗಿದೆ... ರಾಜಕೀಯಕ್ಕಾಗಿ ಪಂಜಾಬ್ ಪೊಲೀಸರ ಪ್ರತಿಷ್ಠೆಯನ್ನು ಹಾಳು ಮಾಡುವುದನ್ನು ನಿಲ್ಲಿಸಿ' ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಧು ಟ್ವೀಟ್ ಮಾಡಿದ್ದಾರೆ.
Tajinder Bagga could be from a different party, one could have ideological differences. But Political vendetta, of @ArvindKejriwal & @BhagwantMann, to settle personal scores through Punjab police is a cardinal sin… Stop tarnishing the image of Punjab Police by Politicising it..
— Navjot Singh Sidhu (@sherryontopp) May 6, 2022
ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಜನಕಪುರಿಯಲ್ಲಿರುವ ಅವರ ಮನೆಗೆ ಕೆಲವರು ಬಂದು ಮಗನನ್ನು ಕರೆದುಕೊಂಡು ಹೋದರು ಎಂದು ಬಗ್ಗಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಪಂಜಾಬ್ ಪೊಲೀಸರ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.
ಬಗ್ಗಾ ಅವರನ್ನು ಪಂಜಾಬ್ಗೆ ಕರೆತರಲಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಪಂಜಾಬ್ ಪೊಲೀಸರನ್ನು ಕುರುಕ್ಷೇತ್ರದ ಬಳಿ ಹರಿಯಾಣ ಪೊಲೀಸರು ತಡೆಹಿಡಿದಿದ್ದಾರೆ. ಕುರುಕ್ಷೇತ್ರಕ್ಕೆ ಬಂದ ದೆಹಲಿ ಪೊಲೀಸರು, ಬಗ್ಗಾರನ್ನು ದೆಹಲಿಗೆ ವಾಪಸ್ ಕರೆದೊಯ್ದಿದ್ದಾರೆ. ಇದು ಬಿಜೆಪಿ ಮತ್ತು ಎಎಪಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.
ಪಂಜಾಬ್ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಬಗ್ಗಾ ಅವರ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.
ಕೋಮು ಭಾವನೆ ಕೆರಳಿಸಿದ, ಎರಡು ಕೋಮುಗಳ ಮಧ್ಯೆ ದ್ವೇಷ ಹುಟ್ಟುಹಾಕಿದ ಆರೋಪದಲ್ಲಿ ಪಂಜಾಬ್ನ ಮೊಹಾಲಿಯಲ್ಲಿ ಬಗ್ಗಾ ವಿರುದ್ಧ ಏಪ್ರಿಲ್ 1ರಂದು ಪ್ರಕರಣ ದಾಖಲಿಸಲಾಗಿತ್ತು. ಎಎಪಿ ನಾಯಕರು ನೀಡಿದ್ದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.