ನವದೆಹಲಿ: ಪತ್ನಿಯು ಪುರಾವೆಗಳಿಲ್ಲದೇ ಪತಿಯ ಚಾರಿತ್ರ್ಯವಧೆ ಮಾಡುವುದು ಕ್ರೌರ್ಯ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು ಪತ್ನಿಯ ಅರ್ಜಿಯನ್ನು ವಜಾಗೊಳಿಸಿತು.
ತನ್ನ ಅತ್ತಿಗೆಯೊಂದಿಗೆ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು. ‘ಇದು ಮನೆಯಲ್ಲಿ ಗೊತ್ತಿರುವ ವಿಚಾರ. ಎಲ್ಲರೂ ಈ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಪತ್ನಿಆರೋಪಿಸಿದ್ದರು.
‘ಹೆಂಡತಿ ಮಾಡಿದ ಆಧಾರರಹಿತ ಆರೋಪಗಳು ಗಂಡನ ಚಾರಿತ್ರ್ಯವಧೆಗೆ ಸಮಾನ. ಇದು ಗಂಡನಿಗೆ ನೀಡುವ ಮಾನಸಿಕ ಹಿಂಸೆ’ ಎಂದು ನ್ಯಾಯಪೀಠ ಹೇಳಿದೆ. ವಾದ–ಪ್ರತಿವಾದದ ವೇಳೆ ಪತ್ನಿಯು ಆಧಾರರಹಿತ ಆರೋಪ ಮಾಡಿರುವುದು ಸ್ಪಷ್ಟವಾಗಿದೆ ಎಂದ ಕೋರ್ಟ್, ಅರ್ಜಿಯನ್ನು ತಿರಸ್ಕರಿಸಿತು.
ಪತ್ನಿಯ ಸುಳ್ಳು ಆರೋಪ ಹಾಗೂ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡುವಂತೆ ಪತಿಯು ಮನವಿ ಮಾಡಿದ್ದರು.