ನವದೆಹಲಿ: ಪೂರ್ವ ಲಡಾಖ್ ಬಳಿ ಇರುವ ಅನಿಶ್ಚಿತತೆ ಬಗೆಹರಿಸುವುದು ಸೇರಿದಂತೆ ಗಡಿ ವಿಚಾರದಲ್ಲಿ ಚೀನಾದ ಜೊತೆಗೆ ರಚನಾತ್ಮಕ ಚರ್ಚೆಯನ್ನು ಭಾರತ ನಿರೀಕ್ಷಿಸುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಉಭಯ ದೇಶಗಳ ನಡುವೆ ಸೇನಾ ಹಂತದಲ್ಲಿ ಚುಶುಲ್–ಮೊಲ್ಡೊ ಬಳಿ ಜನವರಿ 12ರಂದು 14ನೇ ಸುತ್ತಿನ ಮಾತುಕತೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತ ಈ ಪ್ರತಿಕ್ರಿಯೆ ನೀಡಿದೆ.
ಉಭಯ ದೇಶಗಳ ನಡುವೆ ಹಿರಿಯ, ಉನ್ನತ ಮಟ್ಟದ ಸೇನಾ ಕಮಾಂಡರ್ ಹಂತದ ಮಾತುತೆಯು 12ರಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ವಿವಾದಿತ ಪ್ರದೇಶಗಳಿಗೆ ಅನ್ವಯಿಸಿ ಗೊಂದಲ ಬಗೆಹರಿಸಲು ಭಾರತ ರಚನಾತ್ಮಕ ಚರ್ಚೆ ನಿರೀಕ್ಷಿಸುತ್ತಿದೆ. ಬಿಗುವಿನ ಸ್ಥಿತಿ ಇರುವ ಪ್ರದೇಶಗಳಿಂದ ಸೇನೆ ಹಿಂಪಡೆಯುವ ವಿಷಯಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿವೆ.
13ನೇ ಸುತ್ತಿನ ಚರ್ಚೆ ಅ.10, 2021ರಂದು ನಡೆದಿತ್ತು. ಉಭಯ ದೇಶಗಳು ತಮ್ಮ ನಿಲುವಿಗೆ ಬದ್ಧರಾಗಿದ್ದು, ಯಥಾಸ್ಥಿತಿ ಮುಂದುವರಿದಿತ್ತು. ನವೆಂಬರ್ 18ರಂದು ವರ್ಚುವಲ್ ಸ್ವರೂಪದಲ್ಲಿ ನಡೆದಿದ್ದ ರಾಜತಾಂತ್ರಿಕ ಹಂತದ ಚರ್ಚೆಯಲ್ಲಿ ಸೇನಾ ಹಂತದಲ್ಲಿ 14ನೇ ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಲಾಗಿತ್ತು.
ಪಾಂಗಾಂಗ್ ಸರೋವರದ ಬಳಿಕ ಉಭಯ ಸೇನೆಯ ತುಕಡಿಗಳ ನಡುವೆ ಘರ್ಷಣೆ ನಡೆದ ಬಳಿಕ ಮೇ 5, 2020ರಿಂದ ಅನಿಶ್ಚಿತ ಸ್ಥಿತಿ ನಿರ್ಮಾಣವಾಗಿದೆ. ಉಭಯ ದೇಶಗಳು ಗಡಿ ರೇಖೆಗೆ ಹೊಂದಿಕೊಂಡಂತೆ 50,000 ರಿಂದ 60000 ಸೈನಿಕರನ್ನು ಜಮಾವಣೆ ಮಾಡಿವೆ.