ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಗೆ ಸೂಚಿಸಿವೆ.
ಈ ಕುರಿತು ಗುರುವಾರ ಜಂಟಿ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಭಾರತ ಹಾಗೂ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಣ ಸಭೆಯಲ್ಲಿ ಒಮ್ಮತ ಮೂಡಿ ಬಂದಿದ್ದು, ಬುಧವಾರ ಮಧ್ಯರಾತ್ರಿಯಿಂದಲೇ ಕದನ ವಿರಾಮ ನಿಯಮಗಳ ಒಪ್ಪಂದವನ್ನು ಪಾಲಿಸಲು ನಿರ್ಧರಿಸಲಾಗಿದೆ.
ಎರಡು ದೇಶಗಳ ಹಿತದೃಷ್ಟಿಯಿಂದ ಗಡಿಯುದ್ಧಕ್ಕೂ ಶಾಂತಿಯನ್ನು ಭಂಗಗೊಳಿಸಿ ಹಿಂಸಾಚಾರಕ್ಕೆ ಕಾರಣವಾಗುವ ಪ್ರಮುಖ ಸಮಸ್ಯೆಗಳನ್ನು ಆಲಿಸಲು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಒಪ್ಪಿಕೊಂಡಿದೆ.
ಉಭಯ ರಾಷ್ಟ್ರಗಳು ಗಡಿಯುದ್ಧಕ್ಕೂ ಗಡಿ ನಿಯಂತ್ರಣ ರೇಖೆ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಗೆ ಸೂಚಿಸಿವೆ. ಫೆಬ್ರುವರಿ 24ರ ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವುದೇ ಅನಿರೀಕ್ಷಿತ ಘಟನೆ ಅಥವಾ ತಪ್ಪು ತಿಳುವಳಿಕೆ ಎದುರಾದಲ್ಲಿ ಅಸ್ತಿತ್ವದಲ್ಲಿರುವ ಹಾಟ್ಲೈನ್ ಕಾಂಟಾಕ್ಟ್ ಹಾಗೂ ಗಡಿಭಾಗದಲ್ಲಿ ಸಭೆನಡೆಸಿ ಪರಿಹಾರ ವಿಧಾನಗಳನ್ನು ಅನುಸರಿಸಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.