ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳ ಎದುರು ದಿಟ್ಟ ಹೋರಾಟ ನಡೆಸಿದ ಭಾರತೀಯ ಯೋಧರಿಗೆ ಭಾರತೀಯ ಸೇನೆಯು ಮಂಗಳವಾರ ವಿಶೇಷ ಗೀತೆಯ ಮೂಲಕ ನಮನ ಸಲ್ಲಿಸಿದೆ.
'ಗಾಲ್ವನ್ ಕೆ ವೀರ್' ಹೆಸರಿನಲ್ಲಿ ಗಾಲ್ವನ್ ವೀರ ಯೋಧರಿಗೆ ಗಾಯಕ ಹರಿಹರನ್ ಗೀತ ನಮನ ಸಲ್ಲಿಸಿದ್ದಾರೆ. ಕಳೆದ ವರ್ಷ ಜೂನ್ 15ರಂದು ಗಾಲ್ವನ್ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದರು.
ಅತ್ಯಂತ ಕಠಿಣ ಪರಿಸ್ಥಿತಿ, ಕಡಿದಾದ ಪ್ರದೇಶಗಳು ಹಾಗೂ ಪರ್ವತ ಪ್ರದೇಶಗಳಲ್ಲಿ ದೇಶದ ರಕ್ಷಣೆಗಾಗಿ ಸವಾಲುಗಳನ್ನು ಮೀರಿ ಮುನ್ನಡೆಯುವ ಸೈನಿಕರ 'ಸಾಹಸ ಯಾತ್ರೆ' ವಿಡಿಯೊದಲ್ಲಿ ದಾಖಲಾಗಿದೆ. 4ನಿಮಿಷ 59 ಸೆಕೆಂಡ್ಗಳಿರುವ ವಿಡಿಯೊವನ್ನು ಭಾರತೀಯ ಸೇನೆಯ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಚೀನಾ ಯೋಧರೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಸೇನೆಯ ಎರಡನೇ ಅತಿ ಉನ್ನತ ಪ್ರಶಸ್ತಿಯಾದ ಮಹಾವೀರ ಚಕ್ರ, ಇತರ ನಾಲ್ಕು ಯೋಧರಿಗೂ ವೀರ ಚಕ್ರ ಪ್ರಶಸ್ತಿ ಘೋಷಿಸಲಾಯಿತು.