ನವದೆಹಲಿ: ಯಾರಿಗೇ ಆಗಲಿ ಕೋವಿಡ್ ಲಸಿಕೆ ನೀಡುವುದನ್ನು, ಆಸ್ಪತ್ರೆಗೆ ದಾಖಲಿಸುವುದನ್ನು ಅಥವಾ ಚಿಕಿತ್ಸೆ ನೀಡುವುದನ್ನು ಆಧಾರ್ ಇಲ್ಲ ಎನ್ನುವ ಏಕೈಕ ಕಾರಣಕ್ಕಾಗಿ ನಿರಾಕರಿಸುವಂತಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಶನಿವಾರ ಹೇಳಿದೆ.
ಯಾವುದೇ ಅಗತ್ಯ ಸೇವೆಯನ್ನು ನಿರಾಕರಿಸುವ ನೆಪವಾಗಿ ಆಧಾರ್ ಅನ್ನು ದುರುಪಯೋಗ ಪಡೆಸಿಕೊಳ್ಳಬಾರದು ಎಂದೂ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಕೋವಿಡ್ ಎರಡನೇ ಅಲೆ ದೇಶದಲ್ಲಿ ತೀವ್ರಗೊಂಡಿರುವ ಸಂದರ್ಭದಲ್ಲೇ ಯುಐಡಿಎಐ ಈ ಪ್ರಕಟಣೆ ಬಿಡುಗಡೆ ಮಾಡಿದೆ.
ಆಸ್ಪತ್ರೆಗೆ ದಾಖಲಿಸಿಕೊಳ್ಳುವುದೂ ಸೇರಿದಂತೆ ವೈದ್ಯಕೀಯ ಸೇವೆಗಳನ್ನು ಆಧಾರ್ ಇಲ್ಲವೆಂಬ ಕಾರಣಕ್ಕೆ ನಿರಾಕರಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಕೆಲವು ವರದಿಗಳು ಪ್ರಕಟವಾದ ಬೆನ್ನಲ್ಲೇ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಯಾರಾದರೂ ಆಧಾರ್ ಹೊಂದಿಲ್ಲದಿದ್ದಲ್ಲಿ, ಕೆಲವೊಂದು ಕಾರಣಗಳಿಗಾಗಿ ಅವರ ಆಧಾರ್ ಆನ್ಲೈನ್ ದೃಢೀಕರಣವೂ ಯಶಸ್ವಿಯಾಗದಿದ್ದಲ್ಲಿ ಅವರಿಗೆ ಸಂಬಂಧಪಟ್ಟ ಇಲಾಖೆಗಳು ‘ಆಧಾರ್ ಕಾಯ್ದೆ (2016)’ರ ಅಡಿಯಲ್ಲಿ ಸೇವೆಗಳನ್ನು ಒದಗಿಸಬೇಕು ಎಂದು ಪ್ರಾಧಿಕಾರ ಹೇಳಿದೆ.
ಒಂದು ವೇಳೆ ಆಧಾರ್ ಇಲ್ಲವೆಂಬ ಕಾರಣಕ್ಕೆ ಸೇವೆ ಅಥವಾ ಸವಲತ್ತನ್ನು ನಿರಾಕರಿಸಿದಲ್ಲಿ ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದೂ ಪ್ರಾಧಿಕಾರವು ಜನರಿಗೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.