ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಮಂಡಿಸಿದ್ದಾರೆ.
‘ರೈತರ ಸಮಸ್ಯೆಗಳನ್ನು ಚರ್ಚಿಸಲು ಗುರುವಾರ ಒಂದು ಗಂಟೆಯ ವಿಶೇಷ ಅಧಿವೇಶವನ್ನು ಕರೆಯಲಾಗಿತ್ತು. ಈ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಲಾಗಿದ್ದು, ಆದಷ್ಟು ಬೇಗ ಅವುಗಳನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಲಾಗಿದೆ.
‘ದೇಶದಲ್ಲಿ ಕೇಂದ್ರ ಸರ್ಕಾರದ ಕಾಯ್ದೆ ವಿರುದ್ಧ ಪ್ರತಿಭಟಿಸಲಾಗುತ್ತಿದೆ. ಇದು ಇತಿಹಾಸದಲ್ಲಿ ರೈತರು ಕೈಗೊಂಡ ಮಹತ್ವಪೂರ್ಣ ಪ್ರತಿಭಟನೆ. ಕೇಂದ್ರ ಸರ್ಕಾರದ ಈ ಕಾಯ್ದೆಗಳು, ರೈತ ವಿರೋಧಿ ಮಾತ್ರವಲ್ಲದೇ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ’ ಎಂದು ಪಿಣರಾಯಿ ವಿಜಯನ್ ಅವರು ದೂರಿದ್ದಾರೆ.
‘ಕಳೆದ 35 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 32 ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಸರ್ಕಾರದ ಕೆಲವು ಕಾನೂನುಗಳು ನಮ್ಮ ಜೀವನಕ್ಕೆ ಹಾನಿ ಉಂಟು ಮಾಡಬಹುದು ಎಂಬ ಭಯ ಜನರಲ್ಲಿರುವಾಗ, ಅದರ ಬಗ್ಗೆ ಸರಿಯಾದ ಕ್ರಮಕೈಗೊಳ್ಳುವುದು ಶಾಸಕಾಂಗ ಸಭೆಯ ನಾಯಕರ ಕರ್ತವ್ಯ. ಕೃಷಿಯು ನಮ್ಮ ದೇಶದ ಸಂಸ್ಕೃತಿಯ ಒಂದು ಭಾಗವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.