ಚೆನ್ನೈ: ಕೋವಿಡ್ನಿಂದ ಗುಣಮುಖನಾಗಲು ಸತ್ತ ಹಾವನ್ನು ತಿಂದು ವಿಡಿಯೊ ಚಿತ್ರೀಕರಿಸಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಆತನಿಗೆ ₹ 7 ಸಾವಿರ ದಂಡ ವಿಧಿಸಿರುವ ಘಟನೆ ಮಧುರೈನಲ್ಲಿ ನಡೆಸಿದೆ.
50 ವರ್ಷದ ವಡಿವೇಲು ಬಂಧಿತ ಆರೋಪಿಯಾಗಿದ್ದಾರೆ. ಹಾವುಗಳನ್ನು ಸೇವಿಸುವುದರಿಂದ ಕೋವಿಡ್ ಸೇರಿದಂತೆ ವಿವಿಧ ಬಗೆಯ ಕಾಯಿಲೆಗಳಿಂದ ಗುಣಮುಖವಾಗಬಹುದು ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದರು. ಬಳಿಕ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪೆರುಮಾಲ್ಪಟ್ಟಿ ಪ್ರದೇಶದಲ್ಲಿ ವಡಿವೇಲು ಅವರನ್ನು ಬಂಧಿಸಲಾಗಿದೆ ಎಂದು ಮಧುರೈ ಜಿಲ್ಲಾ ಅರಣ್ಯ ಅಧಿಕಾರಿ(ಡಿಎಫ್ಒ) ಎಸ್.ಆನಂದ್ ತಿಳಿಸಿದ್ದಾರೆ.
ಜನರನ್ನು ಪ್ರಚೋದಿಸಿ ಕೋವಿಡ್ ಪರಿಸ್ಥಿತಿಯ ಲಾಭ ಪಡೆಯಲು ಈ ರೀತಿ ಮಾಡಿರುವುದಾಗಿ ವಡಿವೇಲು ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.