ಪಣಜಿ: ಮಹದಾಯಿ ವಿವಾದದ ಕುರಿತು ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದು, ಆ ರಾಜ್ಯದೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ.
‘ಅರ್ಜಿಯನ್ನು ಸಲ್ಲಿಸುವ ಮೂಲಕ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಸರಿಯಾದ ದಾರಿಯಲ್ಲಿ ಇದ್ದೇವೆ’ ಎಂದು ಹೇಳಿದ್ದಾರೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
‘ಗೋವಾ ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವುದೇಕೆ ಎಂದು ಅರ್ಥವಾಗುತ್ತಿಲ್ಲ. ಕರ್ನಾಟಕವು ಮಹದಾಯಿ ಯೋಜನೆಯನ್ನು ಮುಂದುವರಿಸಲಿದೆ’ ಎಂದು ಪ್ರಲ್ಹಾದ ಜೋಶಿ ಮಂಗಳವಾರ ಹೇಳಿದ್ದರು.
ಕರ್ನಾಟಕವು ಮಹದಾಯಿ ಜಲಾಯನ ಪ್ರದೇಶದ ನೀರನ್ನು ಕಳಸಾ–ಬಂಡೂರ ಕಾಲುವೆ ಮೂಲಕ ತಿರುಗಿಸುತ್ತಿದೆ. 13.42 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮುಂದಾಗುವ ಮೂಲಕ ಕಾನೂನು ಉಲ್ಲಂಘಿಸುತ್ತಿದೆ. ಈ ಯೋಜನೆಯಿಂದ ಪರಿಸರ ವೈವಿಧ್ಯತೆಗೆ ಧಕ್ಕೆಯಾಗಲಿದೆ ಎಂದು ಗೋವಾ ಆರೋಪಿಸಿದೆ.