ಮುಂಬೈ: ಮಾಜಿ ಸಚಿವ ಡಾ.ದೀಪಕ್ ಸಾವಂತ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾಕ್ಕೆ ಬುಧವಾರ ಸೇರ್ಪಡೆಯಾಗಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದೀಪಕ್ ಸಾವಂತ್ ಅವರನ್ನು ಏಕನಾಥ ಶಿಂದೆ ಸೇರಿದಂತೆ ಶಿವಸೇನಾ ಮುಖಂಡರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ದೀಪಕ್ ಸಾವಂತ್ ಅವರನ್ನು ಶಿವಸೇನಾ ಪಕ್ಷಕ್ಕೆ ಸಂತೋಷದಿಂದ ಸ್ವಾಗತಿಸುತ್ತೇನೆ. ಅವರ ಅನುಭವದಿಂದ ನಮ್ಮ ಪಕ್ಷಕ್ಕೆ ಲಾಭವಾಗಲಿದೆ ಎಂದು ಶಿಂದೆ ಹೇಳಿದ್ದಾರೆ.
ದೀಪಕ್ ಸಾವಂತ್ ಅವರು ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದರು.
ಸಾವಂತ್ ಅವರು 2014ರಿಂದ 2018ರವರೆಗೆ ದೇವೇಂದ್ರ ಫಡಣವೀಸ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಬಳಿಕ ಎಂಎಲ್ಸಿಯೂ ಆಗಿದ್ದರು. 2018ರಲ್ಲಿ ಉದ್ಧವ್ ಠಾಕ್ರೆ ಅವರು ಸಾವಂತ್ರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಅಲ್ಲದೆ, ವಿಧಾನ ಪರಿಷತ್ತಿನ ಸ್ಥಾನವನ್ನು ನಿರಾಕರಿಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣವನ್ನೇ ನಿಜವಾದ ಶಿವಸೇನಾ ಎಂದು ಚುನಾವಣಾ ಆಯೋಗ ಫೆ.17ರಂದು ಘೋಷಣೆ ಮಾಡಿತ್ತು. ಅದರಂತೆ, ಶಿಂದೆ ಬಣಕ್ಕೆ ಶಿವಸೇನಾದ ಮೂಲ ಚಿಹ್ನೆಯಾದ 'ಬಿಲ್ಲು ಮತ್ತು ಬಾಣ'ದ ಗುರುತು ದಕ್ಕಿದೆ.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 55 ವಿಜೇತ ಅಭ್ಯರ್ಥಿಗಳ ಪೈಕಿ ಶೇ 76 ಮಂದಿ ಏಕನಾಥ ಶಿಂದೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಪರವಾಗಿ ಶೇ. 23.5 ಮಂದಿ ಮಾತ್ರ ಇದ್ದಾರೆ ಎಂದು ಚುನಾವಣಾ ಆಯೋಗ ಹೇಳಿತ್ತು.
I welcome Dr. Deepak Sawant to our Shiv Sena party. We will benefit from his experience: Maharashtra CM Eknath Shinde pic.twitter.com/Q3FD11T8iL