ಮುಂಬೈ: 12ನೇ ಶತಮಾನದ ದಾರ್ಶನಿಕ, ವಚನಕಾರ ಬಸವೇಶ್ವರರ ಬೃಹತ್ ಸ್ಮಾರಕವನ್ನು ಸೊಲ್ಲಾಪುರ ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಕರ್ನಾಟಕ ಗಡಿಯ ಸೊಲ್ಲಾಪುರ ಜಿಲ್ಲೆಯು ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದವರನ್ನು ಒಳಗೊಂಡಿದೆ. ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಮರಾಠಿ, ತೆಲುಗು ಮತ್ತು ಕನ್ನಡ ಭಾಷಿಕರಿದ್ದು, ಹಲವು ಸಂಸ್ಕೃತಿಗಳ ಸಂಗಮ ಸ್ಥಾನವಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ 'ಮಹಾ ವಿಕಾಸ್ ಅಘಾಡಿ' ಮೈತ್ರಿ ಸರ್ಕಾರವು ಸೊಲ್ಲಾಪುರದ ಮಂಗಳವೇಡಾ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಿಸಲು ಮುಂದಾಗಿದೆ. ಸೋಮವಾರ 2021-22ನೇ ಸಾಲಿನ ಬಜೆಟ್ ಮಂಡನೆ ವೇಳೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
‘ಸಂತ ಬಸವೇಶ್ವರರು ಸೊಲ್ಲಾಪುರ ಜಿಲ್ಲೆಯ ಮಂಗಳವೇಡಾದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿದ್ದರು. ಅವರು ಜನರಿಗೆ ಸಮಾನತೆ, ಕಾಯಕ ಮತ್ತು ನೈತಿಕ ಜೀವನದ ಮಹತ್ವವನ್ನು ಬೋಧಿಸಿದವರು. ಅವರ ನೆನಪಿನಲ್ಲಿ ಸ್ಮಾರಕ ನಿರ್ಮಿಸಲು ಅಗತ್ಯವಿರುವ ಅನುದಾನ ನೀಡಲಾಗುವುದು’ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಮಂಗಳವೇಡಾವು ‘ಸಂತರ ನಾಡು’ ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಸಂತ ಜಯತೀರ್ಥ, ಸಂತ ದಾಮಾಜಿ, ಸಂತ ಕನ್ಹೋಪಾತ್ರ, ಸಂತ ಬಸವೇಶ್ವರ ವಾಸವಿದ್ದರು.