ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಗೆದ್ದ ಶಿಂಧೆ: ಮುಖ್ಯಮಂತ್ರಿ ಸ್ಥಾನ ಭದ್ರ

Last Updated 4 ಜುಲೈ 2022, 16:05 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸ ಮತ ಗೆದ್ದಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಎದ್ದ ಶಿಂಧೆ ಅವರು ಬಿಜೆಪಿ ಬೆಂಬಲದಲ್ಲಿ ಜೂನ್‌ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

288 ಸದಸ್ಯ ಬಲದ (ಈಗ 287 ಸದಸ್ಯರು ಇದ್ದಾರೆ) ವಿಧಾನಸಭೆಯಲ್ಲಿ ಶಿಂಧೆ ಅವರ ಪರವಾಗಿ 164 ಮತಗಳು ಚಲಾವಣೆ ಆದವು. ವಿಶ್ವಾಸಮತದ ವಿರುದ್ಧ 99 ಮತಗಳು ಚಲಾವಣೆ ಆಗಿವೆ. ಒಟ್ಟು 263 ಶಾಸಕರು ಮತ ಚಲಾಯಿಸಿದ್ದಾರೆ.

ಶಿಂಧೆ ಮತ್ತು ದೇವೇಂದ್ರ ಫಡಣವೀಸ್‌ ನೇತೃತ್ವದ ಸರ್ಕಾರಕ್ಕೆ ಸಿಕ್ಕ ಎರಡನೇ ಮಹತ್ವದ ಗೆಲುವು ಇದು. ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಗೆದ್ದಿದ್ದಾರೆ. ರಾಹುಲ್ ಅವರಿಗೆ 164 ಮತಗಳು ಸಿಕ್ಕಿದ್ದವು. ಮಹಾ ವಿಕಾಸ್ ಆಘಾಡಿಯ ಅಭ್ಯರ್ಥಿ ರಾಜನ್‌ ಸಲ್ವಿ ಅವರಿಗೆ 107 ಮತಗಳು ಸಿಕ್ಕಿದ್ದವು.

ಶಿವಸೇನಾ ನಾಯಕತ್ವದ ವಿರುದ್ಧ ಕಳೆದ ತಿಂಗಳು ಬಂಡಾಯ ಎದ್ದ ಶಿಂಧೆ ಅವರಿಗೆ ಈಗ ಶಿವಸೇನಾದ 40 ಶಾಸಕರ ಬೆಂಬಲ ಇದೆ. ಪಕ್ಷದಿಂದ ಆಯ್ಕೆಯಾದ ಶಾಸಕರ ಪೈಕಿ ಮೂರನೇ ಎರಡಕ್ಕೂ ಹೆಚ್ಚು ಶಾಸಕರ ಬೆಂಬಲ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ. ಶಿಂಧೆ ಅವರಿಗೆ ಮೂರನೇ ಎರಡಕ್ಕೂ ಹೆಚ್ಚು ಶಾಸಕರ ಬೆಂಬಲ ಇದೆ.

ಇದಕ್ಕೂ ಹಿಂದೆಮುಖ್ಯಮಂತ್ರಿ ಯಾಗಿದ್ದ ಉದ್ಧವ್‌ ಠಾಕ್ರೆ ಅವರಿಗೆ ಶಿಂಧೆ ಬಂಡಾಯದಿಂದಾಗಿ ಬಹುಮತ ನಷ್ಟವಾಗಿತ್ತು. ಹಾಗಾಗಿ, ಅವರು ಜೂನ್‌ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್ ಜತೆಯಾಗಿದ್ದ ಮಹಾ ವಿಕಾಸ ಆಘಾಡಿ ಸರ್ಕಾರ ಪತನ ವಾಗಿತ್ತು.

‘ನನ್ನನ್ನು (ಹಿಂದೆ) ಹೇಗೆ ನಡೆಸಿಕೊಳ್ಳಲಾಗಿದೆ ಎಂಬುದಕ್ಕೆ ಸಾಕ್ಷಿಯಾದ ಜನರು ಈ ಸದನದಲ್ಲಿ ಇದ್ದಾರೆ. ದೀರ್ಘಕಾಲ ನನ್ನನ್ನು ದಮನಿಸಲಾಗಿತ್ತು’ ಎಂದು ಶಿಂಧೆ ಅವರು ಸದನದಲ್ಲಿ ಹೇಳಿದರು. ಆದರೆ ಅದನ್ನು ಅವರು ವಿವರಿಸಲಿಲ್ಲ.

ಸದನದಲ್ಲಿ ಮಾತನಾಡಿದ ದೇವೇಂದ್ರ ಫಡಣವೀಸ್‌ ಅವರು ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ನಾಯ ಕತ್ವದ ಕೊರತೆ ಇತ್ತು ಎಂದರು. ಈಗ ಸದನದಲ್ಲಿ ಇಬ್ಬರು (ಶಿಂಧೆ ಮತ್ತು ಫಡಣವೀಸ್‌) ನಾಯಕರು ಇದ್ದಾರೆ. ಅವರು ಜನರಿಗೆ ಸದಾ ಲಭ್ಯ ಇರಲಿದ್ದಾರೆ ಎಂದರು.

ಸೇನಾ ಶಾಸಕ ಸಂತೋಷ್‌ ಬಾಂಗರ್‌ ಅವರು ವಿಶ್ವಾಸಮತದ ಮೇಲಿನ ಮತದಾನಕ್ಕೂ ಮುನ್ನ ಶಿಂಧೆ ಅವರ ಪಾಳಯ ಸೇರಿಕೊಂಡರು. ಶಿಂಧೆ ಮತ್ತು ಇತರ ಶಾಸಕರು ಗುವಾಹಟಿಯಲ್ಲಿ ತಂಗಿದ್ದಾಗ ಮರಳಿ ಬರುವಂತೆ ಬಾಂಗರ್‌ ವಿನಂತಿಸಿಕೊಂಡಿದ್ದರು. ಹೀಗಾಗಿ ಶಿಂಧೆ ಅವರನ್ನು ಬೆಂಬಲಿಸುವ ಶಿವಸೇನಾ ಶಾಸಕರ ಸಂಖ್ಯೆ 40ಕ್ಕೆ ಏರಿಕೆಯಾಯಿತು.

ಹಲವರು ಗೈರುಹಾಜರು:ಮೂವರು ಶಾಸಕರು ಮತದಾನದಿಂದ ದೂರ ಉಳಿದರು. 20 ಶಾಸಕರು ಸದನಕ್ಕೆ ಗೈರುಹಾಜರಾಗಿದ್ದರು. ಅವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಮತ್ತು ಎನ್‌ಸಿಪಿಯವರು. ಮಾಜಿ ಸಚಿವರಾದ ಕಾಂಗ್ರೆಸ್‌ನ ಅಶೋಕ್‌ ಚವಾಣ್‌ ಮತ್ತು ವಿಜಯ ವಡೆವಟ್ಟಿವರ್‌ ಅವರೂ ಗೈರುಹಾಜರಾದವರಲ್ಲಿ ಸೇರಿದ್ದಾರೆ. ಕಾಂಗ್ರೆಸ್‌ನ 11 ಶಾಸಕರು ಗೈರುಹಾಜರಾಗಿದ್ದರು.

ಪ್ರಮುಖ ಬೆಳವಣಿಗೆಗಳು

lಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಸೋಮವಾರ ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಜೆಪಿ ವಿರೋಧ ಪಕ್ಷವಾಗಿದ್ದು, ದೇವೇಂದ್ರ ಫಡಣವೀಸ್ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ‘ಅಜಿತ್ ಪವಾರ್ ಅವರು ಒಬ್ಬ ಪ್ರಬುದ್ಧ ನಾಯಕ’ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ

l‘ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು (ವಿಎಟಿ) ಕಡಿತ ಮಾಡುತ್ತೇವೆ. ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಶಿಂಧೆ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ವಿಶ್ವಾಸಮತ ಸಾಬೀತಿನ ನಂತರ ನಡೆದ ಚರ್ಚೆಗೆ ಪ್ರತಿಕ್ರಿಯೆ ನೀಡುವಾಗ ಅವರು ಈ ಘೋಷಣೆ ಮಾಡಿದ್ದಾರೆ

lಶಿಂಧೆ ಬಣದ ಶಾಸಕರನ್ನು ಪಕ್ಷದ ಮುಖ್ಯ ಸಚೇತಕರಾಗಿ ಪರಿಗಣಿಸಿದ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶವನ್ನು ಪ್ರಶ್ನಿಸಿ ಶಿವಸೇನಾದ ಉದ್ಧವ್ ಠಾಕ್ರೆ ಬಣವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಜುಲೈ 11ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಪೀಠವು ಹೇಳಿದೆ. ಉದ್ಧವ್ ಠಾಕ್ರೆ ಬಣದ ಸುನಿಲ್ ಪ್ರಭು ಅವರನ್ನು ಶಿವಸೇನಾದ ಮುಖ್ಯ ಸಚೇತಕ ಹುದ್ದೆಯಿಂದ ತೆರವು ಮಾಡಿ, ಆ ಹುದ್ದೆಗೆ ಶಿಂಧೆ ಬಣದ ಭರತ್ ಗೋಡಾವಾಲಾ ಅವರನ್ನು ನೇಮಕ ಮಾಡುವ ಆದೇಶ ಪತ್ರಕ್ಕೆ ಸ್ಪೀಕರ್ ಭಾನುವಾರ ತಡರಾತ್ರಿ ಸಹಿ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT