ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಇಲ್ಲಿನ ಕಾಳಿಘಾಟ್ ಪ್ರದೇಶದಲ್ಲಿ ಸ್ಥಳೀಯ ಪಾಲಿಕೆ ಕೇಂದ್ರದ ಬಳಿ ಸಾಲಿನಲ್ಲಿ ನಿಂತು ‘ಸ್ವಸ್ಥ್ಯ ಸಾಥಿ’ ಯೋಜನೆಯ ಸ್ಮಾರ್ಟ್ ಕಾರ್ಡ್ ಪಡೆದರು.
ಮುಖ್ಯಮಂತ್ರಿ ಅವರ ಈ ನಡೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು, ‘ಇದೊಂದು ಶುದ್ಧ ನಾಟಕ’ ಎಂದು ಟೀಕಿಸಿದ್ದಾರೆ.
ಟಿಎಂಸಿ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ, ನಗರಾಭಿವೃದ್ಧಿ ಖಾತೆ ಸಚಿವ ಫಿರ್ರಾದ್ ಹಕೀಂ ಮತ್ತು ಇತರೆ ಸರ್ಕಾರಿ ಅಧಿಕಾರಿಗಳ ಜೊತೆಗೂಡಿ ಕೇಂದ್ರದಜೈಹಿಂದ್ ಭವನಕ್ಕೆ ಬೆಳಿಗ್ಗೆ 11.45ಕ್ಕೆ ಬಂದು ಕಾರ್ಡ್ ಸ್ವೀಕರಿಸಿದರು.
ಸ್ವಸ್ಥ್ಯ ಸಾಥಿ ಎಂಬುದು ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮುಂಚೂಣಿ ಕಾರ್ಯಕ್ರಮವಾಗಿದ್ದು, ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ₹ 5 ಲಕ್ಷದವರೆಗಿನ ವೆಚ್ಚದ ವೈದ್ಯಕೀಯ ಸೌಲಭ್ಯದ ಭರವಸೆ ನೀಡಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಕೀಂ ಅವರು, ಮುಖ್ಯಮಂತ್ರಿ ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಕಾರ್ಡ್ ಸ್ವೀಕರಿಸಿದರು. ಅವರೂ ಕೂಡಾ ಇತರ ನಾಗರಿಕರಂತೆ ಒಬ್ಬರು ಎಂಬುದನ್ನು ಇದು ಬಿಂಬಿಸುತ್ತದೆ ಎಂದರು.
ಮುಖ್ಯಮಂತ್ರಿ ಅವರು ಭಾನುವಾರ, ಎಲ್ಲ ಸಚಿವರು ಯೋಜನೆಯ ಕಾರ್ಡ್ ಪಡೆಯಬೇಕು ಎಂದು ಸಲಹೆ ಮಾಡಿದ್ದರು.