ಗುವಾಹಟಿ: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಸೋಮವಾರ ಸಂಜೆಯಿಂದಲೂ ಭಾರಿ ಮಳೆಯಾಗುತ್ತಿದೆ. ನಗರದ ಬೋರಾಗಾಂವ್ ಪ್ರದೇಶದಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿ ನಾಲ್ವರು ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರೆಲ್ಲ ವಲಸೆ ಕಾರ್ಮಿಕರಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಗುವಾಹಟಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಹಲವು ಶಾಲೆ, ಕಚೇರಿಗಳು ರಜೆ ಘೋಷಿಸಿವೆ. ತೀರಾ ಅನಿವಾರ್ಯವಲ್ಲದ ಹೊರತು ಮನೆಯಿಂದ ಹೊರಗಡೆ ತೆರಳದಂತೆ ಕಾಮರೂಪ್ ಮೆಟ್ರೊ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ.
ಬುಧವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ದರಾಂಗ್, ದಿಬ್ರೂಗಡ ಸೇರಿದಂತೆ 7 ಜಿಲ್ಲೆಗಳ ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.