ಮುಂಬೈ: ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಜಾರಿ ನಿರ್ದೇಶನಾಲಯ (ಇ.ಡಿ) ಕಸ್ಟಡಿಯನ್ನು ಆಗಸ್ಟ್ 8ರ ವರೆಗೆ ವಿಸ್ತರಿಸಲಾಗಿದೆ.
ಸಂಜಯ ರಾವುತ್ ಅವರನ್ನು ಇ.ಡಿ ಅಧಿಕಾರಿಗಳು ಭಾನುವಾರ ತಮ್ಮ ಕಚೇರಿಗೆ ಕರೆದೊಯ್ದಿದ್ದರು. ಅದಕ್ಕೂ ಮುನ್ನ ಅವರ ಮನೆಯಲ್ಲಿ ಶೋಧ ನಡೆಸಿದ್ದ ಅಧಿಕಾರಿಗಳು ದಾಖಲೆ ಇಲ್ಲದ ₹11.5 ಲಕ್ಷ ನಗದು ದೊರೆತಿದೆ ಎಂದು ಹೇಳಿದ್ದರು.
ಪತ್ರಾ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾಗಿದೆ.
ಮುಂಬೈನ ಹೌಸಿಂಗ್ ಡೆವಲಪ್ಮೆಂಟ್ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದಿಂದ ಸಂಜಯ ರಾವುತ್ ಹಾಗೂ ಅವರ ಕುಟುಂಬಕ್ಕೆ ₹1.06 ಕೋಟಿ ಸಿಕ್ಕಿದೆ ಎಂದು ಇ.ಡಿ ಆರೋಪಿಸಿದೆ.
ಈ ಕಂಪನಿಯ ನಿರ್ದೇಶಕ ಪ್ರವೀಣ್ ರಾವುತ್ ಅವರನ್ನು ಇ.ಡಿ. ಈಗಾಗಲೇ ಬಂಧಿಸಿದೆ. ಆದರೆ, ತಮ್ಮ ವಿರುದ್ಧ ಇ.ಡಿ ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ಸಂಜಯ ರಾವುತ್, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ ಎಂದಿದ್ದಾರೆ.