ನಾಗಪುರ: ಹಣ ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿಜಾರಿ ನಿರ್ದೇಶನಾಲಯವು(ಇ.ಡಿ) ನಾಗಪುರ ಜಿಲ್ಲೆಯಲ್ಲಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಎರಡು ಮನೆಗಳಲ್ಲಿ ಭಾನುವಾರ ಶೋಧ ಕಾರ್ಯಾಚರಣೆ ನಡೆಸಿದೆ.
‘ಕತೋಲ್ ಪಟ್ಟಣ ಮತ್ತು ವಾಡ್ವಿಹಿರಾ ಗ್ರಾಮದಲ್ಲಿರುವ ದೇಶ್ಮುಖ್ ಅವರ ಮನೆಗಳ ಮೇಲೆ ಇ.ಡಿಯ ಪ್ರತ್ಯೇಕ ತಂಡವು ದಾಳಿ ನಡೆಸಿದೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಶೋಧ ಕಾರ್ಯಾಚರಣೆ ಆರಂಭವಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ವಾಡ್ವಿಹಿರಾ ಗ್ರಾಮದಲ್ಲಿರುವ ಮನೆಯಲ್ಲಿ ಶೋಧ ಕಾರ್ಯಾಚರಣೆ ಮಧ್ಯಾಹ್ನ 12ಕ್ಕೆ ಮುಕ್ತಾಯವಾಗಿದೆ. ಆದರೆ ಕತೋಲಾದಲ್ಲಿ ಕಾರ್ಯಾಚರಣೆ ಮಧ್ಯಾಹ್ನದ ನಂತರವೂ ಮುಂದುವರಿದಿದೆ’ ಎಂದು ಅವರು ಹೇಳಿದರು.
ಅನಿಲ್ ದೇಶಮುಖ್ ವಿರುದ್ಧ ದಾಖಲಾಗಿರುವ ಬಹುಕೋಟಿ ಲಂಚ ಮತ್ತು ಸುಲಿಗೆ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.