ಮುಂಬೈ: ‘ನೈರುತ್ಯ ಮುಂಗಾರು ಬುಧವಾರಮುಂಬೈಗೆ ಪ್ರವೇಶಿಸಿದ್ದು, ಇದರ ಪರಿಣಾಮವಾಗಿ ಮುಂಬೈ ಮತ್ತು ಉಪನಗರಗಳಲ್ಲಿ ಮುಂಜಾನೆ ಭಾರಿ ಮಳೆಯಾಗಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
‘ಮುಂಬೈನ ಹಲವು ಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಇದರಿಂದ ಸ್ಥಳೀಯ ರೈಲು ಸೇವೆಗೆ ಯಾವುದೇ ಅಡಚಣೆ ಉಂಟಾಗಿಲ್ಲ. ಆದರೆ ಕೆಲವೊಂದು ಬಸ್ಗಳ ಮಾರ್ಗವನ್ನು ಬದಲಾಯಿಸಲಾಗಿದೆ’ ಎಂದು ಐಎಂಡಿ ಹೇಳಿದೆ.
‘ಕಳೆದ 24 ಗಂಟೆಗಳಲ್ಲಿ ಕೊಲಾಬಾ ವೀಕ್ಷಣಾಲಯ ಮತ್ತು ಸಾಂತಾಕ್ರೂಜ್ ವೀಕ್ಷಣಾಲಯದಲ್ಲಿ ಕ್ರಮವಾಗಿ 77.4 ಮಿ.ಮೀ ಮತ್ತು 59.6 ಮಿ.ಮೀ ಮಳೆ ದಾಖಲಾಗಿದೆ’ ಎಂದು ಐಎಂಡಿ ಹೇಳಿದೆ.