ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶನಿವಾರ ಮಧ್ಯರಾತ್ರಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಎಂಬವರನ್ನು ಬಂಧಿಸಿದೆ.
12 ತಾಸು ನಿರಂತರವಾಗಿ ಪ್ರಶ್ನಿಸಿದ ಬಳಿಕ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜೆ ಹೇಳಿಕೆಯನ್ನು ದಾಖಲು ಮಾಡಲು ದಕ್ಷಿಣ ಮುಂಬೈನ ಕುಂಬಲ್ಲಾ ಬೆಟ್ಟದಲ್ಲಿರುವ ಎನ್ಐಎ ಕಚೇರಿಗೆ ಬೆಳಗ್ಗೆ 11.30ಕ್ಕೆ ಹಾಜರಾಗಲು ತಿಳಿಸಲಾಗಿತ್ತು. ಬಳಿಕ ಮಧ್ಯರಾತ್ರಿ 11.50ರ ಹೊತ್ತಿಗೆ ಸಚಿನ್ ವೇಜ್ ಬಂಧನವನ್ನು ಎನ್ಐಎ ಖಚಿತಪಡಿಸಿದೆ.
ಫೆಬ್ರುವರಿ 25ರಂದು ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ವಾಹನದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಬೆದರಿಕೆ ಪತ್ರ ಇತ್ತು.
ಕಾರ್ಮೈಕಲ್ ರಸ್ತೆಯ ಬಳಿ ಸ್ಪೋಟಕಗಳಿಂದ ತುಂಬಿದ್ದ ವಾಹನವನ್ನು ಇರಿಸುವಲ್ಲಿ ಸಚಿನ್ ವಾಜೆ ಪಾತ್ರ ಹಾಗೂ ಪ್ರಕರಣದಲ್ಲಿ ಭಾಗಿದಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.
ಮುಕೇಶ್ ಅವರ ನಿವಾಸದ ಬಳಿ ಪತ್ತೆಯಾಗಿದ್ದ ವಾಹನವು ಮನ್ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು. ಈ ವಾಹನ ಕಳವಾಗಿದ್ದ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಥಾಣೆಯಲ್ಲಿ ನಿಗೂಢ ರೀತಿಯಲ್ಲಿ ಅವರ ಶವ ಪತ್ತೆಯಾಗಿತ್ತು.