ತಿರುಪತಿ: ತಿರುಮಲದಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವವು ಅ. 16ರಿಂದ ಆರಂಭವಾಗಲಿದ್ದು, ಈ ಬಾರಿ ಭಕ್ತರು ಮತ್ತು ಮೆರವಣಿಗೆ ಇಲ್ಲದೆಯೇ ಬ್ರಹ್ಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಟಿಟಿಡಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಕೋವಿಡ್–19 ಕಾರಣಕ್ಕಾಗಿ ಮೆರವಣಿಗೆ ಮತ್ತು ಭಕ್ತರ ಭಾಗವಹಿಸುವಿಕೆ ಇಲ್ಲದೆಯೇ ಒಂಬತ್ತು ದಿನಗಳ ಕಾಲ ಬ್ರಹ್ಮೋತ್ಸವವನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಯಿತು’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
‘ಬೆಟ್ಟದೊಳಗಿರುವ ದೇವಸ್ಥಾನದಲ್ಲಿ ಹಿರಿಯ ಅರ್ಚಕರು ಮತ್ತು ಉನ್ನತಮಟ್ಟದ ಅಧಿಕಾರಿಗಳು ಮಾತ್ರ ಬ್ರಹ್ಮೋತ್ಸವದ ವಿಧಿ–ವಿಧಾನಗಳನ್ನು ನೆರೆವೇರಿಸುವರು. ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾರೆ’ ಎಂದೂ ಅವರು ಹೇಳಿದ್ದಾರೆ.