ನವದೆಹಲಿ: ಕೊರೊನಾವೈರಸ್ ಸೋಂಕು ಪ್ರಕರಣ ಏರುತ್ತಿರುವ ನಡುವೆಯೂ ರಾಷ್ಟ್ರ ರಾಜಧಾನಿಯಲ್ಲಿ ಮಗದೊಂದು ಬಾರಿ ಲಾಕ್ಡೌನ್ ಹೇರುವ ಸಾಧ್ಯತೆಯನ್ನು ದೆಹಲಿ ಆರೋಗ್ಯಸಚಿವ ಸತ್ಯೇಂದರ್ ಜೈನ್ ಅಲ್ಲಗಳೆದಿದ್ದಾರೆ.
ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಲಾಕ್ಡೌನ್ ಒಂದೇ ಪರಿಹಾರವಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಕೊರೊನಾ ವೈರಸ್ ಹೇಗೆ ಹರಡುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲದ ಕಾರಣ ಅಂದು ಮೊದಲ ಬಾರಿಗೆ ಲಾಕ್ಡೌನ್ ಘೋಷಿಸಿದಾಗ ವಿವೇಚನೆ ಅಡಗಿತ್ತು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಗೆ ಸೋಂಕು ತಗುಲಲು ಮತ್ತು ಚೇತರಿಸಿಕೊಳ್ಳಲು ಅಂದಾಜು ತಲಾ 14 ದಿನಗಳು ಬೇಕಾಗುತ್ತದೆ. ಹಾಗಾಗಿ 21 ದಿನಗಳ ಲಾಕ್ಡೌನ್ ವಿಧಿಸಿದರೆ ವೈರಸ್ ಮುಕ್ತವಾದಿತೇ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ಲಾಕ್ಡೌನ್ ಅನ್ನು ವಿಸ್ತರಿಸುತ್ತಲೇ ಇದ್ದರು. ಆದರೆ ವೈರಸ್ ಸಾಯಲಿಲ್ಲ. ಹಾಗಾಗಿ ಲಾಕ್ಡೌನ್ ಪರಿಹಾರ ಎಂದು ನಾನು ಭಾವಿಸುವುದಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಮಗದೊಂದು ಲಾಕ್ಡೌನ್ಹೇರುವ ಸಾಧ್ಯತೆಯಿಲ್ಲ ಎಂದವರು ಸ್ಪಷ್ಟಪಡಿಸಿದರು.