ಗುವಾಹಟಿ:ಅಸ್ಸಾಂನಲ್ಲಿ 300ಕ್ಕೂ ಅಧಿಕ ಕಳ್ಳಬೇಟೆಗಾರರು ಶರಣಾಗಿದ್ದು, ಇನ್ನು ಮುಂದೆ ವನ್ಯಮೃಗಗಳ ಹಾಗೂ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಶರಣಾದವರಿಗೆ ₹ 50,000 ಹಾಗೂ ಪರ್ಯಾಯ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುವುದಾಗಿ ಬೋಡೊಲ್ಯಾಂಡ್ ಪ್ರಾದೇಶಿಕ ಪರಿಷತ್ತು (ಬಿಟಿಸಿ) ಘೋಷಿಸಿದೆ. ಇದರ ಬೆನ್ನಲ್ಲೇ ಕಳ್ಳಬೇಟೆಗಾರರು ಶರಣಾಗಿದ್ದಾರೆ. ತಾವು ಬಳಸುತ್ತಿದ್ದ ಆಯುಧಗಳನ್ನು ಚಿರಂಗ್ ಜಿಲ್ಲೆಯ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಇನ್ನು ಮುಂದೆ, ನೆರೆಯ ಜಿಲ್ಲೆ ಕೊಕ್ರಜಾರ್ನಲ್ಲಿರುವ ರೈಮೊನಾ ನ್ಯಾಷನಲ್ ಪಾರ್ಕ್ನ ವನ್ಯಜೀವಿಗಳನ್ನು ರಕ್ಷಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.
‘ಕುಟುಂಬ ನಿರ್ವಹಣೆಗಾಗಿ ಪ್ರಾಣಿಗಳ ಬೇಟೆಯಾಡುತ್ತಿದ್ದೆವು. ಇದು ಕಾನೂನುಬಾಹಿರ ಹಾಗೂ ಕೆಟ್ಟದ್ದು ಎಂಬುದು ಅರಿವಾಗಿದೆ. ಬೇರೆ ಉದ್ಯೋಗ ಕೈಗೊಳ್ಳಲು ನೆರವು ನೀಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ವನ್ಯಮೃಗಗಳ ಬೇಟೆಯಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಧೀರನ್ ನರ್ಜರಿ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.
422 ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯವನ್ನು ಕಳೆದ ಜೂನ್ನಲ್ಲಿ ನ್ಯಾಷನಲ್ ಪಾರ್ಕ್ ಎಂಬುದಾಗಿ ಘೋಷಿಸಲಾಗಿದೆ. ಏಷ್ಯನ್ ಆನೆಗಳು, ರಾಯಲ್ ಬಂಗಾಳ ಹುಲಿಗಳು ಹಾಗೂ ಹಲವಾರು ಪ್ರಭೇದಗಳ ಪ್ರಾಣಿ–ಪಕ್ಷಿಗಳು ಈ ಅರಣ್ಯದಲ್ಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.