ನವದೆಹಲಿ: ಪಿಎಂ ಕೇರ್ಸ್ ಫಂಡ್ನಡಿ ಲಭ್ಯವಿರುವ ಹಣವನ್ನು ಕೋವಿಡ್–19 ಲಸಿಕೆ, ಆಮ್ಲಜನಕ ಘಟಕಗಳ ಸ್ಥಾಪನೆ ಹಾಗೂ ಅಗತ್ಯ ವೈದ್ಯಕೀಯ ಪರಿಕರಗಳ ಖರೀದಿಗಾಗಿ ಬಳಕೆ ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿ ಸುಪ್ರಿಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಸಂಬಂಧ ವಕೀಲ ವಿಪ್ಲವ ಶರ್ಮ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.
‘ಎಲ್ಲ ಖಾಸಗಿ, ಚಾರಿಟಬಲ್ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಕೇಂದ್ರಗಳನ್ನು ಅಳವಡಿಸಬೇಕು, ಆ ಮೂಲಕ ರೋಗಿಗಳಿಗೆ ಉತ್ತಮ ಗುಣಮಟ್ಟದ ಆಮ್ಲಜನಕ ಸಿಗುವುದನ್ನು ಖಾತರಿಪಡಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದೂ ಅವರು ಕೋರಿದ್ದಾರೆ.
ಎಲ್ಲ ನಗರಗಳಲ್ಲಿ ವಿದ್ಯುತ್ ಹಾಗೂ ಇತರ ಚಿತಾಗಾರಗಳನ್ನು ಸ್ಥಾಪಿಸಬೇಕು. ಈಗಿರುವ ಚಿತಾಗಾರ, ಸ್ಮಶಾನಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳುವಂತೆಯೂ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.